Friday, December 30, 2011

೨೦೧೧ ರ ನನ್ನ ಹಿನ್ನೋಟ



ನಮಸ್ಕಾರ ಸ್ನೇಹಿತರೇ, ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದು ೨೦೧೧ ರ ನನ್ನ ಕೊನೆಯ ಬರಹ! ಎಷ್ಟು ಬೇಗ ೨೦೧೧ ಕಳೆದು ಹೋಯಿತು? ಕಾಲಗರ್ಬದಲ್ಲಿ ಸದ್ದಿಲ್ಲದೇ ಸೇರಿ ಹೋಗುತ್ತಿರುವ ಈ ವರ್ಷಕ್ಕೆ ನಮ್ಮದೂ ಒಂದು ವಿದಾಯ ಹೇಳಬೇಕಲ್ಲವೇ? ಅದಕ್ಕೆ ಮುಂಚೆ ನನ್ನ ಜೀವನದಲ್ಲಿ ಈ ವರ್ಷ ನಡೆದ ಕೆಲವು ಘಟನೆಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ.

೨೦೧೦ ರ ಡಿಸೆಂಬರ್‌ನಲ್ಲಿ ನಾನು ಮಾಡುತ್ತಿದ್ದ ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್ ಕೆಲಸಕ್ಕೆ ಗುಡ್‌ಬೈ ಹೇಳಿಬಿಟ್ಟೆ! ಮುಂದೇನು ಎನ್ನುವ ಯೋಚನೆಗೆ ಆಸ್ಪದವಿಲ್ಲದಂತೆ ಈಸ್ಪೀಕ್ ತಂತ್ರಾಂಶದಲ್ಲಿ ಕನ್ನಡ ಸೇರಿಸಲು ಕೆಲಸ ಮಾಡುವ ಅವಕಾಶ ಸಿಕ್ಕಿತು. ೨೦೧೧ ರ ಆರಂಭದಲ್ಲಿ ಬರಹದಲ್ಲಿ ಕನ್ನಡ ಬೆರಳಚ್ಚು ಮಾಡುವುದನ್ನು ಕಲಿಯಲು ಪ್ರಾರಂಭಿಸಿದೆ. ಇದಕ್ಕೆ ನನ್ನ ತಂದೆಯವರು ಸಹಾಯ ಮಾಡಿದರು. ಈ ಮಧ್ಯೆ, ನನಗೆ ಕರ್ನಾಟಕ ಸರಕಾರ ಹಾಗು ಕೆಲವು ಎನ್‌ಜೀಓ ಗಳು ಸೇರಿ ಜನವರಿಯಲ್ಲಿ ನಡೆಸಿದ ಐಟೀ ಫಾರ್ ದಿ ಡಿಸೇಬಲ್ಡ್ ವಿಚಾರ ಘೋಷ್ಟಿಯಲ್ಲಿ ಭಾಗವಹಿಸುವ ಅವಕಾಶ ತಮಿಳುನಾಡಿನ ನನ್ನ ಸ್ನೇಹಿತರಿಂದ ಸಿಕ್ಕಿತು. ಅಲ್ಲಿ ಅನೇಕ ವ್ಯಕ್ತಿಗಳ ಪರಿಚಯವಾಯಿತು. ಆ ಎಲ್ಲಾ ಕಥೆಯನ್ನು ನಿಮಗೆ ಹೇಳುತ್ತಾ ಕುಳಿತರೆ ಒಂದು ಸಣ್ಣ ಕಿರುಹೊತ್ತಿಗೆಯನ್ನೇ ಬರೆಯಬಹುದು! ಇರಲಿ, ಅದರಿಂದ ನನ್ನ ಸ್ನೇಹಿತ ವರ್ಗ, ಹಾಗು ನನ್ನ ತಿಳುವಳಿಕೆ ಹೆಚ್ಚಾಯಿತು ಎನ್ನುವುದು ಮಾತ್ರ ಸತ್ಯ. ಈ ಸಮಯದಲ್ಲಿ ನನಗೆ ತಮಿಳುನಾಡಿನ ತರ್ಡ್‌ ಐ ಟೆಕ್ನಿಕಲ್ ವಾಲೆಂಟರಿ ಗ್ರೂಪಿನ ಬಗೆಗೆ ತಿಳಿಯಿತು. ಅದಾದ ನಂತರ ಜನವರಿ ಅಂತ್ಯದಲ್ಲಿ ನನ್ನ ಬಗ್ಗೆ ಹಾಗೂ ಈಸ್ಪೀಕ್ ಕನ್ನಡದ ಬಗ್ಗೆ ಅಬಸಿ ಶ್ರೀನಾಥ್ (ನನ್ನ ತಂದೆ) ಬರೆದ ಲೇಖನವೊಂದು ದಟ್ಸ್‌ಕನ್ನಡ ಪೋರ್ಟಲ್‌ನಲ್ಲಿ ಪ್ರಖಟವಾಯಿತು. ಅಲ್ಲಿಂದ ನನ್ನ ಸ್ನೇಹಿತ ವರ್ಗ ಮತ್ತೂ ದೊಡ್ಡದಾಯಿತು ಕೆಲ ಗೆಳೆಯರ ವತ್ತಾಯದ ಮೇರೆಗೆ ನಾನೂ ಫೇಸ್‌ಬುಕ್‌ಗೆ ಬಂದೆ! ಅದುವರೆಗೆ ಕೇವಲ ಆರ್ಕುಟ್ ಬಳಸುತ್ತಿದ್ದೆ. ನನ್ನ ತಮ್ಮ ವಿನಾಯಕನ ನೆರವಿನಿಂದ ಫೇಸ್‌ಬುಕ್ಕಿನ ಕೆಲವು ಫೀಚರುಗಳನ್ನು ತಿಳಿದುಕೊಂಡೆ. ಅದಾದನಂತರ ಮಾರ್ಚಿನಲ್ಲಿ ನನ್ನ ಬಗ್ಗೆ ಹಾಗು ಕನ್ನಡ ಈಸ್ಪೀಕ್‌ನ ಬಗ್ಗೆ ನನ್ನ ಬ್ಲಾಗಿನಲ್ಲಿ ನಾನೇ ಬರೆದುಕೊಂಡೆ! ಈ ಸಮಯದಲ್ಲಿಯೇ ಕನ್ನಡಕ್ಕಾಗಿ ಕೆಲಸಮಾಡುತ್ತಿರುವ ಡಾ|| ಪವನಜ ಅವರ ಪರಿಚಯ ಅನಿರೀಕ್ಷಿತವಾಗಿ ಫೋನಿನಲ್ಲಾಯಿತು. ಅದಾದ ನಂತರ ಪೂರ್ಣಪ್ರಜ್ಞ ಬೇಳೂರು ಅವರು ನಮ್ಮ ಮನೆಗೆ ಕೆಲವು ಪತ್ರಕರ್ತರನ್ನು ಕರೆತಂದರು. ಅವರು ನನ್ನ ಸಂದರ್ಶನ ಪಡೆದರು. ನನ್ನ ಕುರಿತಾಗಿ ಪ್ರಜಾವಾಣಿ, ಹೊಸದಿಗಂತ, ಕನ್ನಡಪ್ರಭ, ಡೆಕ್ಕನ್ ಹೆರಾಲ್ಡ್‌ ಪತ್ರಿಕೆಗಳಲ್ಲಿ ಲೇಖನಗಳು ಬಂದವು. ಇದಾದ ನಂತರ ನನ್ನ ಸ್ನೇಹಿತ ವರ್ಗ ಇನ್ನೂ ಹೆಚ್ಚಾಯಿತು. ಪೂರ್ಣಪ್ರಜ್ಞ ಅವರು ಬೇಳೂರು ಸುದರ್ಶನ ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಸುದರ್ಶನ ಅವರು ಆ ಸಮಯದಲ್ಲಿ ಕರ್ನಾಟಕ ಜ್ಞಾನ ಆಯೋಗದ ಕಣಜ ಜಾಲತಾಣದ ಸಮನ್ವಯಕಾರರಾಗಿದ್ದರು. ಅವರು ಈಸ್ಪೀಕ್ ಕನ್ನಡ ಆವೃತ್ತಿಯನ್ನು ಕಣಜ ಜಾಲತಾಣದಲ್ಲಿ ಸೇರಿಸಿಕೊಂಡರು. ಈ ಮಧ್ಯೆ, ಸಾಗರದ ಸರಕಾರಿ ನೌಕರರ ಸಂಘದ ಅಧ್ಯಕ್ಶರಾಗಿರುವ ಮಾಸಾ ನಂಜುಂಡಸ್ವಾಮಿಯವರು ನನಗೆ ಪರಿಚಯವಾದರು. ಅವರು ಸರಕಾರಿ ನೌಕರರ ಸಂಘ ಏಪ್ರಿಲ್ ನಲ್ಲಿ ಸಾಗರದಲ್ಲಿ ನಡೆಸಿದ ‘ಪೀಯೂಸಿ ನಂತರ ಮುಂದೇನು’ ಪಿಯೂಸೀ ವಿದ್ಯಾರ್ಥಿಗಳಿಗೆ ನಡೆಸಿದ ಒಂದು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ನನ್ನಿಂದಲೇ ಆ ಕಾರ್ಯಕ್ರಮದ ಉದ್ಘಾಟನೆ ಮಾಡಿಸಿದರು. ಇದೇ ಸಮಯದಲ್ಲಿ ನಮ್ಮೂರಿನವರೇ ಆದ ದಿನೇಶ್ ಜೋಷಿ ಅವರ ಒಡನಾಟಕ್ಕೆ ಬಂದೆ. ಶಿವಮೊಗ್ಗದ ಪ್ರೊಫೆಸರ್ ಶಾಸ್ತ್ರೀ ಅವರ ಪರಿಚಯವಾಯಿತು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿರುವ ತರ್ಡ್ ಐ ಟೆಕ್ನಿಕಲ್ ವಾಲೆಂಟರೀ ಗ್ರೂಪಿನ ಕಾರ್ಯದರ್ಶಿ ಅವರ ಮನೆಗೆ ಹೋಗಿದ್ದೆ. ಅವರು ನನಗೆ ತರ್ಡ್ ಐ ಪರವಾಗಿ ಒಂದು ಜಿಪೀಎಸ್ ಸಾಧನವನ್ನು ಉಡುಗೊರೆಯಾಗಿಕೊಟ್ಟರು. ಹವ್ಯಕ ಸಾಗರ ಸಂಸ್ಥೆಯವರು ಜೂನ್ ತಿಂಗಳಿನಲ್ಲಿ ಅವರ ಒಂದು ಕಾರ್ಯಕ್ರಮದಲ್ಲಿ ನನಗೆ ಸನ್ಮಾನ ಮಾಡಿದರು. ಇದಾದ ನಂತರ ಜುಲೈ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ವಿಪ್ರ ನೌಕರರ ಸಂಘದ ಒಂದು ಕಾರ್ಯಕ್ರಮವನ್ನು ನಂಜುಂಡಸ್ವಾಮಿಯವರು ನನ್ನಿಂದಲೇ ಉದ್ಘಾಟನೆ ಮಾಡಿಸಿದರು. ಕಣಜ ಯೋಜನೆಯವರು ಅದೇ ತಿಂಗಳಿನಲ್ಲಿ ಕನ್ನಡ ಈಸ್ಪೀಕ್ ತಂತ್ರಾಂಶಕ್ಕಾಗಿ ನಾನು ಮಾಡಿದ ಕೆಲಸಕ್ಕೆ ಒಂದು ಪ್ರಮಾಣಪತ್ರವನ್ನು ನೀಡಿದರು. ಇದಾದ ನಂತರ ಸುದರ್ಶನ ಅವರು ಕಣಜ ಯೋಜನೆಯ ಪರವಾಗಿ ನನ್ನನ್ನು ಸಮರ್ಥನಾಮ್ ಎಂಬ ಎನ್‌ಜೀಒ ದಲ್ಲಿ ಕನ್ನಡ ತಂತ್ರಾಂಶವನ್ನು ತೋರಿಸಲು ಕರೆದುಕೊಂಡು ಹೋಗಿದ್ದರು. ಇದೇ ತಿಂಗಳಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಅವರು ತಯಾರಿಸುತ್ತಿರುವ ಒಂದು ಕನ್ನಡ ತಂತ್ರಾಂಶದ ಪರೀಕ್ಷೆಗಾಗಿ ನನ್ನನ್ನು ಸುಮಾರು ಒಂದು ತಿಂಗಳುಗಳ ಕಾಲ ಕರೆಸಿಕೊಂಡರು. ಅಗಷ್ಟ್ ತಿಂಗಳಿನಲ್ಲಿ ಸೊರಬದಲ್ಲಿ ನಡೆದ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಒಂದು ಸನ್ಮಾನ ಮಾಡಿದರು. ಇದಕ್ಕಾಗಿ ನಾನು ಸೊರಬ ತಾಲ್ಲೂಕು ಸಾಹಿತ್ಯ ಪರಿಶತ್ತೂ, ಶಾಸಕ ಹಾಲಪ್ಪನವರು, ಹಾಗು ಪತ್ರಕರ್ತ ಮಿತ್ರರಾದ ಉಮೇಶ್ ಬಿಚ್ಚುಗತ್ತಿ, ಶ್ರೀಪಾದ ಬಿಚ್ಚುಗತ್ತಿ, ಹಾಗು ದಿನಕರ ಭಟ್ ಭಾವೆ, ಮತ್ತಿತರರಿಗೆ ಕೃತಜ್ಞ. ಬೇಳೂರು ಸುದರ್ಷನ ಅವರ ಜೊತೆ ಟಿವಿ೯ ರಲ್ಲಿ ‘ಕನ್ನಡ ದ ಕಣಜ’ ಎಂಬ ಒಂದು ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಇದರ ಜೊತೆಗೆ ಕನ್ನಡ ಓಸೀಆರ್ ತಂತ್ರಾಂಶ ತಯಾರಿಸುತ್ತಿರುವ ಮೈಸೂರಿನ ಪ್ರೊಫೆಸರ್ ಯೋಗಾನಂದ ಅವರನ್ನು ಸುದರ್ಶನ ಅವರು ಪರಿಚಯಿಸಿದರು. ಮೈಸೂರಿನಲ್ಲಿ ಡಾ|| ಪವನಜ ಅವರನ್ನು ಬೇಟಿಯಾಗುವ ಅವಕಾಶ ಸಿಕ್ಕಿತು. ಸಿದ್ಧಾಪುರದ ನನ್ನ ಹಳೆಯ ಶಾಲೆಯ ಸ್ಥಾಪಕರು ನನ್ನನ್ನು ಕರೆದು ನನಗೆ ಸನ್ಮಾನಿಸಿದರು. ಒಬ್ಬ ವ್ಯಕ್ತಿಗೆ ತಾನು ಓದಿದ ಹಳೆಯ ಶಾಲೆಯವರು ತನ್ನನ್ನು ಗುರುತಿಸುವುದಕ್ಕಿಂತಾ ದೊಡ್ಡ ಸೌಭಾಗ್ಯ ಇನ್ನೇನಿದೆ?!

ಇದೆಲ್ಲಾ ನಡೆಯುತ್ತಿರುವಂತೆ ಕಂಪ್ಯೂಟರಿನಲ್ಲಿ ಹೆಚ್ಚಿನದನ್ನು ಕಲಿಯ ಬೇಕೆಂಬ ನನ್ನ ಆಸಕ್ತಿ ಹೆಚ್ಚಾಯಿತು. ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಂಗ್ವೇಜ್ (c c++ java) ಸರಿಯಾಗಿ ಕಲಿಯಲು ಪ್ರಯತ್ನ ಆರಂಭಿಸಿದೆ. ಈ ಸಮಯದಲ್ಲಿ ನನ್ನ ಸೋದರ ಮಾವ (ಸಂದೇಶ್) ಅವರು ಕೆಲವರನ್ನು ಬೇಟಿ ಮಾಡಿ ನನಗೆ ಅವಕಾಶವನ್ನು ಒದಗಿಸಿಕೊಟ್ಟರು. ಬೆಂಗಳೂರಿನ ಅವರ ಮನೆಯಲ್ಲಿಯೇ ನನಗೆ ಆಶ್ರಯ ಕೊಟ್ಟು ನನ್ನ ಕಂಪ್ಯೂಟರ್ ತರಗತಿಗಳಿಗೆ ಹೋಗಿ ಬರಲು ಅನುಕೂಲ ಮಾಡಿ ಕೊಟ್ಟಿದ್ದಾರೆ. ಅವರಿಗೆ ನಾನು ಚಿರಋಣಿ.

ಡಿಸೆಂಬರ್ ತಿಂಗಳಿನಲ್ಲಿ ಸಾಗರದ ಬಳಿಯ ಹೊಂಗಿರಣ ಶಾಲೆಯ ವಾರ್ಷಿಕೋತ್ಸವದ ವಿಜ್ಞಾನೋತ್ಸವದ ಸಮಾರೋಪ ಸಮಾರಂಭಕ್ಕೆ ನನ್ನನ್ನು ಮುಖ್ಯ ಅತಿಥಿಯನ್ನಾಗಿ ಕರೆದಿದ್ದರು. ಇದಕ್ಕೆ ಕಾರಣ ಪೂರ್ಣಪ್ರಜ್ಞ ಬೇಳೂರುಅವರು. ಬೇಳೂರು ಸುದರ್ಶನ ಹಾಗು ಪೂರ್ಣಪ್ರಜ್ಞ ಬೇಳೂರು ಅವರುಗಳ ವೊತ್ತಾಯದ ಮೇರೆಗೆ ಡಾಕ್ಟ್ರ್ ಬಾತ್ರಾಸ್ ಪಾಸಿಟಿವ್ ಹೆಲ್ತ್ ಅವಾರ್ಡ್‌ಗೆ ಅರ್ಜಿ ಹಾಕಿದೆ. ಡಿಸೆಂಬರ್ ತಿಂಗಳಿನಲ್ಲಿ ಆ ಅವಾರ್ಡ್ ನನಗೆ ಸಿಕ್ಕಿತು.

ಈ ಲೇಖನದಲ್ಲಿ ನನಗೆ ಪ್ರೀತಿ ತೋರಿಸಿದ ಎಲ್ಲಾ ಸ್ನೇಹಿತರ/ಹಿರಿಯರ ಹೆಸರು ಹಾಕಲು ಸಾಧ್ಯವಾಗಿಲ್ಲ. ಅವರೆಲ್ಲರನ್ನೂ ಅದಕ್ಕಾಗಿ ಕ್ಷಮೆ ಕೇಳುತ್ತೇನೆ.

ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ, ನನಗೆ ವಿದ್ಯಾ ದಾನ ಮಾಡಿದ ಎಲ್ಲಾ ಗುರುಗಳಿಗೂ, ನನ್ನ ತಂದೆ-ತಾಯಿಯರಿಗೂ, ನನ್ನ ಮನೆಯ ಎಲ್ಲರಿಗೂ, ನನ್ನ ಸೋದರಮಾವ ಸಂದೇಶ್ ಅವರಿಗೂ, ನಿಮ್ಮೆಲ್ಲರಿಗೂ ಈ ಸಂದರ್ಬದಲ್ಲಿ ವಂದಿಸಬಯಸುತ್ತೇನೆ.

೨೦೧೧ ನನ್ನ ಪಾಲಿಗಂತೂ ಒಂದು ಮರೆಯಲಾಗದ ವರ್ಷ. ಈ ಲೇಖನವನ್ನು ಮುಗಿಸುವ ಮುನ್ನ ೨೦೧೧ ವರ್ಷಕ್ಕೆ ನನ್ನ ಅಂತಿಮ ನಮನ. ಹೊಸ ವರ್ಷ ೨೦೧೨ ನಮ್ಎಲ್ಲರ ಬಾಳಿಗೂ ಹರುಷದ ಸುಧೆ ಹರಿಸಲಿ ಎಂದು ಆಶಿಸುತ್ತೇನೆ.

ಗಣಕದಲ್ಲಿ ಕನ್ನಡ

ಸಾಗರದ ಮಲೆನಾಡು ಮುದ್ರಕರ ಸಂಘದ ವಾರ್ಷಿಕ ಸಂಚಿಕೆಗೆ ನಾನು ಬರೆದ ಲೇಖನ ಇಲ್ಲಿ ನಿಮಗಾಗಿ ಕೊಡುತ್ತಿದ್ದೇನೆ.

‘ಕಂಪ್ಯೂಟರ್’ (ಗಣಕಯಂತ್ರ) ಎನ್ನುವ ಪದವನ್ನು ನಾವೆಲ್ಲರೂ ದಿನ ನಿತ್ಯದಲ್ಲಿ ಕೇಳಿಯೇ ಇರುತ್ತೇವೆ. ಯಾವುದೋ ಒಂದು ಖಾಸಗೀ/ಸರಕಾರಿ ಕೆಲಸಕ್ಕೆ ಬೇಕಾಗುವ ದಾಖಲೆಗಳನ್ನು ಮುದ್ರಣ ರೂಪದಲ್ಲಿ ಪಡೆಯುವುದರಿಂದ ಹಿಡಿದು ಚಲನಚಿತ್ರ ನೋಡುವ, ವಿವಿಧ ಆಟಗಳನ್ನು ಆಡುವ, ಬೇಕಾದ ಮಾಹಿತಿಗಳನ್ನು ಪ್ರಪಂಚದ ಹೆಚ್ಚೂ-ಕಡಿಮೆ ಯಾವುದೇ ಭಾಷೆಯಲ್ಲಿ ಪಡೆಯುವುದರವರೆಗೆ ಎಲ್ಲಾ ಕೆಲಸಕ್ಕೂ ಈ ‘ಗಣಕ ಯಂತ್ರ’ ಬೇಕು.

ಈ ‘ಗಣಕ ಯಂತ್ರ’ ವು ೨೦ ನೆಯ ಶತಮಾನದಲ್ಲಿ ವಿಜ್ಞಾನವು ಮನುಕುಲಕ್ಕೆ ನೀಡಿದ ಒಂದು ಅದ್ಬುತ ಹಾಗೂ ಅವಿಸ್ಮರಣೀಯ ಕೊಡುಗೆ. ಇದು ಎಂತಹಾ ಕ್ಲಿಷ್ಟಕರ ಸಮಸ್ಯೆಯನ್ನಾಗಲಿ ಕ್ಷಣಾರ್ಧದಲ್ಲಿ ಬಿಡಿಸಿ ಅದಕ್ಕೆ ಉತ್ತರವನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ ಹೇಳುವುದಾದರೆ ಗಣಿತದ ಕೋಟಿಗಟ್ಟಲೇ ಸಂಖ್ಯೆಯನ್ನೊಳಗೊಂಡ ಲೆಕ್ಕವನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಮಾಡಿ ಮುಗಿಸಿ ಅದರ ಉತ್ತರವನ್ನು ಬಳಕೆದಾರರಿಗೆ ನೀಡಬಲ್ಲದು. ಗಣಿತವಲ್ಲದೇ, ಪಠ್ಯ, ದೃಷ್ಯ, ಮತ್ತು ಧ್ವನಿಗಳಿಗೆ ಸಂಬಂಧಪಟ್ಟ ಯಾವುದೇ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮಾಡುವ ಮೂಲಕ ಮನುಷ್ಯನ ಕೆಲಸವನ್ನು ಬಹುಮಟ್ಟಿಗೆ ಕಡಿಮೆ ಮಾಡಿದೆ. ಕೋಟ್ಯಾಂತರ ಪುಟಗಳಷ್ಟು ಮಾಹಿತಿಯನ್ನು ತನ್ನ ಅತೀ ಸಣ್ಣ ಸ್ಮೃತಿಕೋಷದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಗಣಕಯಂತ್ರಕ್ಕಿದೆ. ಇದು ಜಗತ್ತಿನ ಯಾವುದೇ ಭಾಷೆಯ ಮಾಹಿತಿಯನ್ನಾದರೂ ತನ್ನಲ್ಲಿ ಇಟ್ಟುಕೊಳ್ಳಬಲ್ಲದು.

ಗಣಕವು ಇಷ್ಟೆಲ್ಲಾ ಮಾಹಿತಿಯನ್ನು ಹೇಗೆ ತನ್ನ ಸಣ್ಣ ಸಣ್ಣ ಸ್ಮೃತಿಕೋಷದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ? ಗಣಕಕ್ಕೆ ನಿರ್ಧಿಷ್ಟ ಕಾರ್ಯವನ್ನು ಮಾಡಲು ಸೂಚನೆ ಕೊಡುವುದು ಹೇಗೇ? ಗಣಕಕ್ಕೆ ತನ್ನದೇ ಭಾಷೆಯಿದೆಯೇ? ಇದ್ದರೆ ಅದು ನಮ್ಮ ವಿವಿಧ ಭಾಷೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತದೆ? ನಮ್ಮ ಕನ್ನಡವೂ ಗಣಕದಲ್ಲಿದೆಯೇ? ಇಂತವೇ ಹತ್ತು-ಹಲವು ಪ್ರಶ್ನೆಗಳು ನಮಗೆ ಮೂಡಬಹುದು. ಅವುಗಳಿಗೆ ಉತ್ತರ ನೀಡುವ ಒಂದು ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಗಣಕವು ತನಗೆ ಕೊಟ್ಟ ಮಾಹಿತಿಗಳನ್ನು ಒಂದು ಗೊತ್ತಾದ ಸಂಕೇತಕ್ಕೆ ಪರಿವರ್ತಿಸಿ ತನ್ನ ಸ್ಮೃತಿಕೋಷದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುತ್ತದೆ. ಬಳಕೆದಾರರು ಯಾವಾಗಲೇ ಆ ಮಾಹಿತಿಯನ್ನು ಪಡೆಯ ಬಯಸಿದರೆ ಸೂಕ್ತ ಸೂಚನೆಗಳನ್ನು ಗಣಕಕ್ಕೆ ಕೊಡುವ ಮೂಲಕ ಆ ಮಾಹಿತಿಯನ್ನು ತತ್‌ಕ್ಷಣದಲ್ಲಿಯೇ ಪಡೆಯಬಹುದು.

ಗಣಕಕ್ಕೆ ಮಾಹಿತಿಗಳನ್ನು ಹಾಗು ಸೂಚನೆಯನ್ನು ಗಣಕದ ಕೀಲೀಮಣೆಯನ್ನು ಅಥವಾ ‘ಮೌಸ್’ ಅನ್ನು ಬಳಸಿ ನೀಡಲಾಗುತ್ತದೆ. ಈ ಸೂಚನೆಗಳ ಕುರಿತಾದ ಮಾಹಿತಿಯನ್ನು ಗಣಕಕ್ಕೆ ಮೊದಲೇ ‘ತಂತ್ರಾಂಶಗಳ’ ಮೂಲಕ ನೀಡಲಾಗಿರುತ್ತದೆ. (‘ತಂತ್ರಾಂಶಗಳೆಂದರೆ ‘ಗಣಕದ ಭಾಷೆ’ ಯಲ್ಲಿ ಗಣಕಕ್ಕೆ ನೀಡಿರುವ ಪೂರ್ವ ನಿರ್ದೇಶನಗಳು.) ಹೌದು, ಗಣಕಕ್ಕೆ ನಮ್ಮ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ! ಗಣಕಕ್ಕೆ ಅರ್ಥವಾಗುವ ಭಾಷೆ ಕೇವಲ ‘ದ್ವಿಮಾನ ಭಾಷೆ’ ಅಂದರೆ‘೧’‘೦’ ಮಾತ್ರ. ಗಣಕವು ಎಲ್ಲಾ ಮಾಹಿತಿಗಳನ್ನು ಇದೇ ಪದ್ಧತಿಯಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ.

ಬೇರೆ ಬೇರೆ ಭಾಷೆಯ ಮಾಹಿತಿಯನ್ನು ಬೇರೆ ಬೇರೆ ‘ಸಂಕೇತ’ (Code) ಗೆ ಪರಿವರ್ತಿಸಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಬಳಕೆದಾರರು ಅದನ್ನು ಬಯಸಿದಾಗ ಮತ್ತೆ ಆಯಾ ಭಾಷೆಗೆ ಪರಿವರ್ತಿಸಿ ಗಣಕದ ಪರದೆಯ ಮೇಲೆ ಮೂಡಿಸುತ್ತದೆ.

ಮಾಹಿತಿಗಳನ್ನು ‘ಸಂಕೇತ’ ಭಾಷೆಗೆ ಪರಿವರ್ತಿಸಲು ಅನೇಕ ‘ಶಿಷ್ಟ’ (Standard) ಗಳಿವೆ. ಅವುಗಳಲ್ಲಿ ಮುಖ್ಯವಾದವೆಂದರೆ, ‘ANSI’ (American National Standard Institute) ಹಾಗು ‘ಯೂನಿಕೋಡ್’ (Unicode) (International Standard) ‘ಅಂತರ ರಾಷ್ಟ್ರೀಯ ಶಿಷ್ಟತೆ’

‘ANSI’ ಯನ್ನು ಆಂಗ್ಲ ಭಾಷೆಯನ್ನು ಗಣಕಕ್ಕೆ ಸೇರಿಸಲು ಸಿದ್ಧಪಡಿಸಲಾಯಿತಾದರೂ ಪ್ರಪಂಚದ ಬೇರೆ ಬೇರೆ ಭಾಷೆಗಳನ್ನು ಆರಂಭದಲ್ಲಿ ಇದರ ಮೂಲಕವೇ ಸಂಕೇತ ರೂಪಕ್ಕೆ ಪರಿವರ್ತಿಸಲಾಗುತ್ತಿತ್ತು. ಆದರೆ, ಆಂಗ್ಲ ಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಗಳನ್ನು ಸಂಗ್ರಹಿಸುವ ಪದ್ಧತಿಯಲ್ಲಿ ಒಂದು ಶಿಷ್ಟತೆ ಇರಲಿಲ್ಲ. ಇದರಿಂದಾಗಿ ಅಂತರಜಾಲದಲ್ಲಿ ವಿವಿಧ ಭಾಷೆಗಳ ಪಠ್ಯವನ್ನು ತೋರಿಸುವುದು ಕಷ್ಟದ ಕೆಲಸವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ‘ಯುನಿಕೋಡ್’ ಎಂಬ ಅಂತರರಾಷ್ಟ್ರೀಯ ‘ಶಿಷ್ಟತೆ’ ಯನ್ನು ಜಾರಿಗೊಳಿಸಲಾಯಿತು. ಈ ಶಿಷ್ಟತೆಯನ್ನು ‘ಯುನಿಕೋಡ್ ಕನ್ಸೋರ್ಟಿಯಂ’ ಎನ್ನುವ ಸಂಘಟನೆಯು ನಿರ್ವಹಿಸುತ್ತದೆ. ಕಾಲ-ಕಾಲಕ್ಕೆ ಭಾಷೆಗಳ ವರ್ಣಮಾಲೆಗಳಲ್ಲಾಗುವ ಬದಲಾವಣೆಗಳಿಗನುಗುಣವಾಗಿ ಶಿಷ್ಟತೆಯನ್ನು ಬದಲಾಯಿಸುವ ಅಥವಾ ಈ ಶಿಷ್ಟತೆಗೆ ಸಂಬಂಧಪಟ್ಟ ಇತರ ಕೆಲಸಗಳನ್ನು ಈ ಸಂಘಟನೆಯು ನೋಡಿಕೊಳ್ಳುತ್ತದೆ. ಇದರಿಂದಾಗಿ ಪ್ರಪಂಚದ ಎಲ್ಲಾ ಭಾಷೆಗಳನ್ನೂ ಗಣಕದಲ್ಲಿ ಸೇರಿಸುವುದು ಸುಲಭಸಾಧ್ಯ. ಆದ್ದರಿಂದ ಯಾವುದೇ ಭಾಷೆಯನ್ನು ಅಂತರಜಾಲದಲ್ಲಿ ತೋರಿಸುವುದು ಸಾಧ್ಯವಾಗುತ್ತದೆ. ಅಲ್ಲದೇ ಈ ಏಕರೂಪ ಶಿಷ್ಟತೆಯು ವಿವಿಧ ಭಾಷೆಗಳಲ್ಲಿ ತಂತ್ರಾಂಶವನ್ನು ಸಿದ್ಧಪಡಿಸಲು ಅನುಕೂಲ ಮಾಡಿಕೊಡುತ್ತದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿನ ಅನೇಕ ಮಾಹಿತಿಗಳು ಅಂತರಜಾಲದಲ್ಲಿ ಲಭ್ಯವಿವೆ; ಅಲ್ಲದೇ ಕನ್ನಡದಲ್ಲಿಯೂ ತಂತ್ರಾಂಶದ ಬೆಳವಣಿಗೆ ಸಾಧ್ಯವಾಗಿದೆ.

ದ್ರಾವಿಡ ಭಾಷೆಗಳಲ್ಲೇ ಕನ್ನಡ ೨ನೆ ಅತ್ಯಂತ ಪ್ರಾಚೀನ ಭಾಷೆ. ‘ಯುನೆಸ್ಕೋ’ ಸಂಘಟನೆಯ ಪ್ರಕಾರ ಕನ್ನಡ ೨೮ ನೆ ಅತೀ ಹೆಚ್ಚು ಮಾತನಾಡಲ್ಪಡುವ ಭಾಷೆ. ಭಾರತದಲ್ಲಿ ಸಾಹಿತ್ಯದಲ್ಲೇ ಅತ್ಯಂತ ಶ್ರೇಷ್ಟವಾದ ‘ಜ್ಞಾನಪೀಠ’ ಪ್ರಶಸ್ತಿಯು ಅತೀ ಹೆಚ್ಚು ಅಂದರೆ ೮ ಬಾರಿ ಕನ್ನಡ ಭಾಷೆಗೆ ಲಭಿಸಿದೆ. ಹೀಗಿದ್ದರೂ ಮಾಹಿತಿತಂತ್ರಜ್ಞಾನದಲ್ಲಿ ನಮ್ಮ ಕನ್ನಡ ಭಾಷೆ ಕೊಂಚ ಹಿಂದೆಬಿದ್ದಿರುವುದು ವಿಪರ್ಯಾಸ. ಹೀಗಿದ್ದರೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಹಿತಿತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯು ಅಪಾರ ಸಾಧನೆ ಮಾಡಿರುವುದು ಸಂತಸದ ಸಂಗತಿ. ಕನ್ನಡವನ್ನು ಗಣಕದಲ್ಲಿ ಬೆರಳಚ್ಚು ಮಾಡಲು ಅನೇಕ ತಂತ್ರಾಂಶಗಳು ಲಭ್ಯವಿವೆ. ಕನ್ನಡ ಭಾಷೆಯ ಅಕ್ಷರಗಳನ್ನು ಗಣಕದ ಪರದೆಯ ಮೇಲೆ ಮೂಡಿಸಲು ವಿವಿಧ ಬಗೆಯ ‘ಫಾಂಟ್’ (Font) ಗಳು ಲಭ್ಯವಿವೆ. ಹೀಗಾಗಿ ಕನ್ನಡ ಭಾಷೆಯನ್ನು ಗಣಕದಲ್ಲಿ ಬೆರಳಚ್ಚು ಮಾಡುವುದು, ಮುದ್ರಿಸುವುದು ಅಥವಾ ಅಂತರಜಾಲಕ್ಕೆ ಸೇರಿಸುವುದು ತುಂಬಾ ಸುಲಭವಾಗಿದೆ. ಇದರಿಂದಾಗಿ ಕನ್ನಡದಲ್ಲಿ ಮುದ್ರಕರು ಹಾಗು ಮುದ್ರಣ ಮಾಧ್ಯಮಗಳು ಹೆಚ್ಚು ಹೆಚ್ಚು ಬೆಳೆಯಲು ಸಾಧ್ಯವಾಗಿದೆ. ಸುಲಭವಾಗಿ ಅಂತರಜಾಲದಲ್ಲಿ ಕನ್ನಡವನ್ನು ಸೇರಿಸಲು ಸಾಧ್ಯವಾಗಿರುವುದರಿಂದ ಅನೇಕ ಕನ್ನಡ ಬ್ಲಾಗುಗಳು ಹಾಗು ವೆಬ್‌ಸೈಟುಗಳು ಹುಟ್ಟಿಕೊಂಡು ಹೆಚ್ಚು ಹೆಚ್ಚು ಮಾಹಿತಿಗಳು ಹಾಗು ಮನೋರಂಜನೆಯನ್ನು ಕನ್ನಡಿಗರಿಗೆ ನೀಡುತ್ತಿವೆ. ಅನೇಕ ಅಂತರಜಾಲ ನಿಘಂಟುಗಳು ಹಾಗೂ ಅಂತರಜಾಲ ‘ಜ್ಞಾನಕೋಷಗಳು’ ಕನ್ನಡ ಭಾಷೆಯ ಗರಿಮೆಗೆ ಮುಖುಟವಿಟ್ಟಂತಾಗಿದೆ. ಬೇರೆ-ಬೇರೆ ಭಾಷೆಗಳಿಂದ ಕನ್ನಡ ಭಾಷೆಗೆ ಅನುವಾದಿಸುವ ಸೌಲಭ್ಯವೂ ಅಂತರಜಾಲದಲ್ಲಿ ರೂಪುಗೊಳ್ಳುತ್ತಿದೆ.
ಇವುಗಳಲ್ಲಿ ಕೆಲವು ಉಪಯುಕ್ತ ಕನ್ನಡ ಬ್ಲಾಗು/ವೆಬ್ಸೈಟುಗಳನ್ನು ನಿಮ್ಮ ಅನುಕೂಲಕ್ಕಾಗಿ ಇಲ್ಲಿ ಕೊಡಲಾಗಿದೆ.

ಕರ್ನಾಟಕ ಜ್ಞಾನ ಆಯೋಗದ ಹೆಮ್ಮೆಯ ’ಅಂತರ ಜಾಲ ಜ್ಞಾನಕೋಷ’ "ಕನಜ"
http://kanaja.in/
’ಕಣಜ’ ದಲ್ಲಿ ಹಲವು ಕನ್ನಡ ನಿಘಂಟು/ಪದಕೋಷಗಳು ಬಳಕೆಗೆ ಲಭ್ಯ. ’ಯುನಿಕೋಡ್’ ಕನ್ನಡ ಪಠ್ಯವನ್ನು ಓದಿ ಹೇಳುವ (ಧ್ವನಿ ರೂಪಕ್ಕೆ ಬದಲಾಯಿಸುವ) ಒಂದು ಮುಕ್ತ ತಂತ್ರಾಂಶವೂ ಲಭ್ಯವಿದೆ.

ಕನ್ನಡ ವಿಕಿಪೀಡಿಯ
http://kn.wikipedia.org/

ಗೂಗಲ್ ಅನುವಾದ

http://translate.google.com/

ಕೆಲವು ಇತರೇ ಕನ್ನಡ ಬ್ಲಾಗು/ಸೈಟುಗಳು:
http://kannada.oneindia.in/
http://www.kendasampige.com/
http://mitramaadhyama.co.in/
http://pavanaja.com/
http://kannada.webdunia.com/
http://vishvakannada.com/

ಗಮನಿಸಿ: ಈ ಪಟ್ಟಿಯಲ್ಲಿ ಕೆಲವೇ ಕೆಲವು ಜಾಲತಾಣಗಳ ವಿಳಾಸ ಲಭ್ಯ. ಇನ್ನೂ ಹೆಚ್ಚಿನ ವಿಳಾಸಕ್ಕಾಗಿ, ಕಣಜದಲ್ಲಿನ ’ಕನ್ನಡ ಬ್ಲಾಗ್ ಸೂಚಿ’ ಗೆ ಬೇಟಿ ನೀದಿ.

ಒಟ್ಟಿನಲ್ಲಿ ಹೇಳುವುದಾದರೆ ಮಾಹಿತಿತಂತ್ರಜ್ಞಾನದಲ್ಲಿ ಕನ್ನಡ ಭಾಷೆಯೂ ಸೇರಿಕೊಂಡಿರುವುದರಿಂದ, ಕನ್ನಡ ಭಾಷೆಗೆ ಹಾಗೂ ಭಾಷೆಯ ಬೆಳವಣಿಗೆಗೆ ತುಂಬಾ ಅನುಕೂಲವಾಗಿರುವುದಂತು ಸತ್ಯ. ಬರೀ ಗಣಕದಲ್ಲಿ ಮಾತ್ರವಲ್ಲದೇ, ಮೊಬೈಲ್ ಫೋನುಗಳು, ’ಟ್ಯಾಬ್ಲೆಟ್’ ಪಿ.ಸಿ.ಗಳಲ್ಲಿಯೂ ನಮ್ಮ ಕನ್ನಡ ಭಾಷೆ ಲಭ್ಯ ಎನ್ನುವುದು ಕನ್ನಡಿಗರಾದ ನಮಗೆ ಅತ್ಯಂತ ಸಂತಸ ಹಾಗು ಹೆಮ್ಮೆಯ ವಿಷಯ.

"ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ"ಜೈ ಕನ್ನಡಾಂಬೆ!

Thursday, September 29, 2011

ಕಲ್ಪನೆ, ಭಾವನೆ, ಯೋಚನೆ

Dear all, in this post I am going write something about immagination and perception. Although this post does not cite any scientific reports, I hope this not unscientific. This artical is written on the basis of some questions raised by the people and some my own experiences. Your comments/responces are highly appreciated with regards to this article. Your comments/responces would definitly will expand my little knowledge! so please do respond me :-)

This article is fully in Kannada.

ಬಹಳ ದಿನಗಳ ನಂತರ ನನಗೆ ತೋಚಿದ ಒಂದು ವಿಚಾರದಬಗ್ಗೆ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದಕ್ಕೆ ನಿಖರವಾದ ವೈಜ್ಞಾನಿಕ ಆದಾರಗಳು ನನ್ನಲ್ಲಿ ಇಲ್ಲದೇ ಹೋದರೂ, ನನಗೆ ಅನೇಕರು ಕೇಳಿದ ಪ್ರಶ್ನೆಗಳು ಹಾಗು ನನ್ನ ಅನುಭವ/ಯೋಚನೆಗಳ ಆದಾರದ ಮೇಲೆ ಇದನ್ನು ಬರೆಯುತ್ತಿದ್ದೇನೆ. ನಿಮ್ಮ ವಿಮರ್ಶೆಗಳಿಗೆ ಮುಕ್ತ ಸ್ವಾಗತ. ನಿಮ್ಮ ಪ್ರತಿಕ್ರಿಯೆಗಳು ನನ್ನ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಲಿದೆ ಎಂಬುದು ನನ್ನ ನಂಬಿಕೆ. ಇರಲಿ, ಇನ್ನು ನೇರವಾಗಿ ವಿಷಯಕ್ಕೆ ಬರೋಣ.

ಪ್ರತಿಯೊಂದು ಜೀವಿಗೂ ಕಲ್ಪಿಸಿಕೊಳ್ಳುವ, ಭಾವಿಸುವ ಹಾಗು ಯೋಚಿಸುವ ಶಕ್ತಿ ಸಹಜವಾಗಿಯೇ ಬಂದಿದೆ. ಈ ಶಕ್ತಿ ಬೆಳೆಯಲು ಆಯಾಯ ಜೀವಿಯ ಸುತ್ತಮುತ್ತಲಿನ ಪರಿಸರ, ನಡೆಯುವ ವಿದ್ಯಮಾನಗಳು, ಹಾಗು ಕೆಲವು ಜೈವಿಕ ಪ್ರಕ್ರಿಯೆಗಳು ಕಾರಣವಾಗುತ್ತವೆ. ತನ್ನ ಸುತ್ತಲಿನ ಪರಿಸರದ ಬಗೆಗೆ ಆ ಜೀವಿಯ ಇಂದ್ರೀಯಗಳು ಮಾಹಿತಿ ನೀಡುತ್ತವೆ. ಇನ್ನು ಜೈವಿಕ ಪ್ರಕ್ರಿಯೆಗಳಿಗೆ ಸಂಬಂಧಪಟ್ಟ ಅಂಶಗಳನ್ನು ವಂಶವಾಹಿಗಳು ಅಥವಾ ಜೀನ್‌ಗಳು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುತ್ತವೆ.

ಈ ಮೇಲೆ ಹೇಳಿದ ವಿಚಾರಗಳು ಜಗತ್ತಿನ ಹೆಚ್ಚೂ ಕಡಿಮೆ ಎಲ್ಲಾ ಜೀವಿಗಳಿಗೂ ಅನ್ವಯವಾಗುತ್ತದೆ. ಆದರೆ ಜೀವ ವೈವಿದ್ಯದ ಒಂದು ಭಾಗವಾಗಿರುವ ಸಸ್ಯಗಳ ಬಗೆಗೆ ಈ ಕುರಿತು ಹೇಳುವುದು ಕಷ್ಟ, ಅಥವಾ ನನಗೆ ಆ ಬಗ್ಗೆ ಮಾಹಿತಿ ಕೊಂಚ ಕಡಿಮೆ. ಕೆಲವರು ಸಸ್ಯಗಳಿಗೂ ಭಾವನೆ-ಯೋಚನೆ ಇದೆ ಎಂದು ಹೇಳಿದರೂ ಮತ್ತೆ ಕೆಲವರು ಅವಕ್ಕೆ ಭಾವನೆ-ಯೋಚನೆಗಳಿದ್ದರೂ ಪ್ರತಿಕ್ರಿಯೆಯನ್ನು ಅವು ಏಕೆ ನೀಡುವುದಿಲ್ಲ ಎಂದು ಪ್ರಶ್ನಿಸುತ್ತಾರೆ. ಅದೆಲ್ಲಾ ಏನೇ ಇರಲಿ ನಾನು ಇಲ್ಲಿ ಹೇಳಹೊರಟಿರುವುದು ಮನುಷ್ಯನ ಭಾವನೆಗಳು, ಕಲ್ಪನೆಗಳು, ಹಾಗು ಯೋಚನೆಗಳಬಗ್ಗೆ ಮಾತ್ರ.

ನಾನು ಮೇಲೆ ಹೇಳಿದಂತೆ ನಮ್ಮ ಇಂದ್ರೀಯಗಳು ನಮ್ಮ ಸುತ್ತಲಿನ ಪರಿಸರದ ಬಗೆಗೆ ಮಾಹಿತಿಯನ್ನು ನಮಗೆ ನೀಡುತ್ತವೆ. ಇದು ನಮ್ಮ ಬುದ್ಧಿಶಕ್ತಿಯನ್ನು ಬೆಳೆಸಿ ನಮ್ಮ ಕಲ್ಪನಾಶಕ್ತಿಯನ್ನು ಬೆಳೆಸುತ್ತದೆ. ನಮಗೆ ನಾವು ನೋಡದ ಅಥವಾ ಕೇಳದ ಒಂದು ವಸ್ತುವಿನ ಬಗ್ಗೆ ಕಲ್ಪಿಸಿಕೊಳ್ಳುವುದು ಎಂದೆಂದಿಗೂ ಸಾಧ್ಯವೇ ಇಲ್ಲ. ಇದನ್ನು ನೀವು ಒಪ್ಪದಿದ್ದರೆ, ನೀವೇ ಬೇಕಾದರೆ ಪರೀಕ್ಷಿಸಿ ನೋಡಬಹುದು. ನಾವು ದೇವರಬಗ್ಗೆ ಕೇಳಿದ್ದೇವೆ. ಅವನನ್ನು ಮನುಷ್ಯ ರೂಪದಲ್ಲಿ ಪೂಜಿಸುತ್ತೇವೆ. ಅದು ದೇವರ ಬಗೆಗೆ ನಮ್ಮ ಒಂದು ಕಲ್ಪನೆ. ಆದರೆ ದೇವರ ಮೂರ್ಥಿ ಪೂಜೆಯನ್ನು ಒಪ್ಪದ ಜನ ದೇವರ ಈ ರೂಪವನ್ನು ಒಪ್ಪುವುದಿಲ್ಲ. ಹಾಗಾದರೆ ದೇವರ ರೂಪ ಹೇಗಿರಬಹುದು? ಕೆಲವರು ದೇವರು ಒಂದು ಶಕ್ತಿ ಅವನು ನಿರಾಕಾರ ಎಂದರೆ, ಕೆಲವರು ದೇವರನ್ನು ಬೆಳಕಿನಂತೇ, ನೀರಿನಂತೇ, ಗಾಳಿಯಂತೆ, ಹೀಗೆ ಅವರವರಿಗೆ ತಿಳಿದಂತೆ ದೇವರನ್ನು ಕಲ್ಪಿಸಿಕೊಳ್ಳುತ್ತಾರೆ, ಆದರೆ ದೇವರ ನಿಜರೂಪವನ್ನು ಬಹುಶಃ ಯಾರಿಂದಲೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಯಾರೂ ದೇವರನ್ನು ನೋಡಿಲ್ಲ! ನಾವು ಕಲ್ಪಿಸಿಕೊಳ್ಳುವ ದೇವರ ರೂಪವು ನಾವು ಕಣ್ಣಿನಿಂದ ನೋಡಿರುವ ಯಾವುದಾದರೂ ಒಂದಕ್ಕೆ ತಳುಕುಹಾಕಿಕೊಂಡಿರುತ್ತದೆ ಅಲ್ಲವೇ? ನೀವು ಬೇಕಾದರೆ ನೀವು ನೋಡಿರದ ಒಂದು ವಸ್ತುವನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ ನೋಡಿ, ನೀವು ನೋಡಿರುವ ಯಾವುದಾದರೂ ಒಂದು ವಸ್ತುವಿಗೆ ಅದನ್ನು ಹೋಲಿಸಿ ಕಲ್ಪಿಸಿಕೊಳ್ಳಲು ಮಾತ್ರ ಸಾಧ್ಯ! ಇನ್ನು ಪಂಚೇಂದ್ರೀಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಹಾಗು ಚರ್ಮಗಳಲ್ಲಿ ಯಾವುದಾದರೂ ಒಂದು ಇಂದ್ರೀಯ ಮನುಷ್ಯನ ಹುಟ್ಟಿನಿಂದಲೇ ಕೆಲಸ ಮಾಡದಿದ್ದರೆ, ಆ ಮನುಷ್ಯನಿಗೆ ಆ ಇಂದ್ರೀಯದಿಂದ ಒಳಬರುವ ಮಾಹಿತಿಯ ಅರಿವೇ ಇರುವುದಿಲ್ಲ! ಉದಾಹರಣೆಗೆ ಹುಟ್ಟಿನಿಂದಲೇ ಬೆಳಕನ್ನು ಕಾಣದ ಒಬ್ಬ ಅಂಧನಿಗೆ ಬೆಳಕಿನ್ ಅರಿವೇ ಇರುವುದಿಲ್ಲ. ಅಂತೆಯೇ ಅದನ್ನು ಕಲ್ಪಿಸಿಕೊಳ್ಳಲೂ ಅವನಿಂದ ಸಾಧ್ಯವೇ ಇಲ್ಲ! ಅದೇ ರೀತಿ ಹುಟ್ಟಿನಿಂದಲೇ ಶಬ್ದವನ್ನೇ ಕೇಳದ ಒಬ್ಬ ಶ್ರವಣ ದೋಶವುಳ್ಳ ವ್ಯಕ್ತಿಗೆ ಶಬ್ದವೆಂದರೇನೆಂದೇ ತಿಳಿದಿರುವುದಿಲ್ಲವಾದ್ದರಿಂದ ಅವನಿಗೆ ಶಬ್ದದ ಕಲ್ಪನೆ ಸಾಧ್ಯವೇ ಇಲ್ಲ! ಇನ್ನೊಂದು ವಿಷಯವೆಂದರೆ ಹುಟ್ಟಿನಿಂದ ಅಂಧರಾದ ವ್ಯಕ್ತಿಗಳು ಕನಸಿನಲ್ಲೂ ಯಾವುದೇ ದೃಷ್ಯವನ್ನು ಕಾಣಲಾರರು! ಹಾಗೆಯೇ ಹುಟ್ಟಿನಿಂದಲೇ ಶ್ರವಣ ದೋಶವುಳ್ಳವರು ತಮ್ಮ ಕನಸಿನಲ್ಲಿ ಯಾವುದೇ ಶಬ್ದವನ್ನು ಕೇಳಲಾರರು! ಇದನ್ನೆಲ್ಲಾ ಗಮನಿಸಿದರೆ, ನಮ್ಮ ಕಲ್ಪನಾಶಕ್ತಿಯು ಇಂದ್ರೀಯಗಳಿಂದ ಒಳಬರುವ ಮಾಹಿತಿಗಳ ಮೇಲೆಯೇ ಅವಲಂಬಿತವಾಗಿದೆ ಎಂಬುದು ಸ್ಫಷ್ಟ. ಆದರೆ ಕೆಲವು ಬಯಕೆಗಳನ್ನು ಹೊಂದಿರುವ ಕಲ್ಪನೆಗಳು,ಭಾವನೆಗಳು, ಯೋಚನೆಗಳು ಅವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಉಂಟಾಗುತ್ತವೆ. ಉದಾಹರಣೆಗೆ ಲೈಂಗಿಕತೆಯ ಕುರಿತ ಯೋಚನೆಗಳು ಅಥವಾ ಕಲ್ಪನೆಗಳು ಇಂದ್ರೀಯಗಳಿಂದ ಬರುವ ಮಾಹಿತಿಯನ್ನು ಅವಲಂಬಿಸಿರುವುದಿಲ್ಲ. ಉದಾಹರ‍ಣೆಗೆ ಒಬ್ಬ ಬುದ್ಧಿಮಾಂದ್ಯ ಮನುಷ್ಯನಿಗೂ ಯಾವುದೇ ಮಾಹಿತಿ ಇಲ್ಲದೇ ಇದ್ದಕ್ಕಿದ್ದಂತೆ ಲೈಂಗಿಕ ಬಯಕೆಗಳು ಹುಟ್ಟಿಕೊಳ್ಳಬಹುದು. ಹೀಗೆ ಕೆಲವು ನೈಸರ್ಗಿಕ ವಿಚಾರಗಳನ್ನು ಬಿಟ್ಟರೆ, ಉಳಿದ ಎಲ್ಲಾ ಕಲ್ಪನೆಗಳು ನಾವು ನೋಡಿದ ಅಥವಾ ಕೇಳಿದ ವಸ್ತು ಅಥವಾ ವಿಷಯಗಳ ಮೇಲೆ ಅವಲಂಬಿತವಾಗಿರುತ್ತವೆ.

ಈ ಮೇಲ್ಕಂಡ ಮಾಹಿತಿಗಳನ್ನು ನನ್ನ ಸ್ವಂತ ಅನುಭವ ಹಾಗು ವಯ್ಯಕ್ತಿಕ ಅಭಿಪ್ರಾಯಗಳ ಮೇಲಷ್ಟೇ ನೀಡಿದ್ದೇನೆ. ನಾನು ಒಬ್ಬ ಅಂಧನಾಗಿದ್ದುಕೊಂಡು ಜೊತೆಗೆ ಬೇರೆ ಬೇರೆ ರೀತಿಯ ಅಂಗವೈಕಲ್ಯ ಹೊಂದಿದವರ ಜೊತೆಗಿನ ನನ್ನ ಸಹವಾಸ, ಮತ್ತೆ ಕೆಲವರು ನನಗೆ ಕೇಳಿದ ವಿವಿಧ ಪ್ರಶ್ನೆಗಳು ಇದನ್ನು ಬರೆಯಲು ಸ್ಫೂರ್ತಿ. ಇದು ಯಾವುದೇ ಮಾನಸಿಕ ಸಂಶೋಧನೆಗಳ ಮೇಲೆ ಆಧಾರಿತವಾಗಿರದೇ ಕೇವಲ ವಯ್ಯಕ್ತಿಕ ಅನುಭವಗಳ ಮೇಲೆ ಆಧಾರಿತವಾಗಿದೆ. ಈ ಲೇಖನ ಸಂಪೂರ್ಣವಾಗಿ ವೈಜ್ಞಾನಿಕವಾದ ಪ್ರಶ್ನೋತ್ತರಗಳಿಂದ ಸಂಯೋಜನೆ ಮಾಡಿಲ್ಲವಾದ್ದರಿಂದ ಇದನ್ನು ಒಪ್ಪುವುದು ಅಥವಾ ಬಿಡುವುದು ನಿಮಗೆ ಬಿಟ್ಟ ವಿಚಾರ, ಆದರೆ ಕೊನೆಯಲ್ಲಿ ಹೇಳಲೇಬೇಕಾದ ಒಂದು ಮಾತೆಂದರೆ, ‘ಅನುಭವದಿಂದ ಜ್ಞಾನ, ಜ್ಞಾನದಿಂದ ವಿಜ್ಞಾನ; ವಿಜ್ಞಾನದಿಂದ ಜ್ಞಾನ ಅಥವಾ ಅನುಭವವಲ್ಲ!’

ಈ ಮೇಲೆ ಹೇಳಿದ ವಿಚಾರಗಳ ಬಗೆಗೆ ನಿಮ್ಮ ವಿಮರ್ಶೆಗಳಿಗೆ ಸ್ವಾಗತ!

Saturday, August 6, 2011

ಸಿರಿ ನುಡಿ "ಈ" ಕನ್ನಡ ನುಡಿ

"ಸಿರಿನುಡಿ" ಇದೊಂದು ಕನ್ನಡ ಅಂತರಜಾಲ ತಾಣ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಭಂದ ಪಟ್ಟ ಅನೇಕ ಮಾಹಿತಿಗಳು ಸಿಗುತ್ತವೆ. ಇಲ್ಲಿನ ಲೇಖನ ಗಳನ್ನು 'DJVU' ಫಾರ್‌ಮ್ಯಾಟಿನಲ್ಲಿ ನೀಡಿದ್ದಾರೆ. ಸಹೃದಯೀ ಕನ್ನಡ ಸಾಹಿತ್ಯಾಸಕ್ತರು ತಮ್ಮ ಪುಸ್ತಕ ಓದುವಂತೆಯೇ ಇಲ್ಲಿನ ಲೇಖನಗಳನ್ನು ಓದಬಹುದು. ಬಹಳ ಮುಖ್ಯ ಸಂಗತಿ ಎಂದರೆ ಇಲ್ಲಿನ ಲೇಖನಗಳು ಯುನಿಕೋಡ್‌ನಲ್ಲೂ ಲಭ್ಯವಿದೆ. ಇದನ್ನು ಕನ್ನಡ "ಟೆಕ್ಸ್‌ಟ್ ಟು ಸ್ಪೀಚ್" (Text To Speech) ಅನ್ನು ಬಳಸಿ ಕಣ್ಣು ಕಾಣದವರೂ, ಅನಕ್ಷರಸ್ತರೂ ಸಹಾ ಓದಬಹುದಾಗಿದೆ. ಇಲ್ಲಿ ಅನೇಕ ವಿಚಾರಗಳ ಕುರಿತು ಲೇಖನಗಳಿವೆ. ಮುಖ್ಯವಾಗಿ ಹೇಳುವುದಾದರೆ, ಪ್ರಜಾವಾಣಿಯ ಹಳತು-ಹೊನ್ನು ಅಂಕಣದಲ್ಲಿ ಪರಿಚಯಿಸಲ್ಪಟ್ಟ ಪುಸ್ತಕಗಳು, ಅವಧೂತ ಶ್ರೇಷ್ಠರಾದ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ ಗುರು ಮಹಾರಾಜರ ಸಂದೇಶೋಪದೇಶ ಸಾಹಸ್ರಿ ಗ್ರಂಥ ಧ್ಯಾನ ಮಿಂಚು, ಡಾ.ಹೆಚ್.ರಾಮಚಂದ್ರಸ್ವಾಮಿರವರ ಮಹಾಭಾರತಕಥಾಸಂಗ್ರಹ, All India Magazine ಮಾಸ ಪತ್ರಿಕೆಯ ಕನ್ನಡ ಅನುವಾದ ಅಖಿಲ ಭಾರತದ ಪತ್ರಿಕೆ, ಅನುಪಮಾ ನಿರಂಜನರವರ ದಿನಕ್ಕೊಂದು ಕಥೆ, ಗೋಪಾಲಕೃಷ್ಣ ಅಡಿಗರು ಆರಂಭಿಸಿ ಬೆಳೆಸಿದ ಸಾಕ್ಷಿ ಪತ್ರಿಕೆಯ ಎಲ್ಲಾ ಸಂಚಿಕೆಗಳು, ಇತ್ಯಾದಿ. ಹೀಗೆ ಹತ್ತು ಹಲವು ಲೇಖನ/ಮಾಹಿತಿ ತುಂಬಿದ ಜಾಲತಾಣ ಸಿರಿನುಡಿ. ಅಂದರೆ "ಈ ಕನ್ನಡ" ವನ್ನು ಬೆಳಸುತತ್ತಿರುವ ಸಿರಿನುಡಿ.

ಇಷ್ಟೆಲ್ಲಾ ಹೇಳಿದ ಮೇಲೆ "ಇಲ್ಲಿ ನಂಗೇನಿಷ್ಟ" ಅಂತ ನಾನೇ ಹೇಳಬೇಕಲ್ಲವೇ? ಹೇಳುತ್ತೇನೆ. ಆದರೆ ಅದರ ಜೊತೆ ನೀವೂ ಸಿರಿನುಡಿ ಜಾಲತಾಣವನ್ನು ಸಂದರ್ಶಿಸಿ ಅಲ್ಲಿ ನಿಮಗೇನಿಷ್ಟ ಅಂತ ದಯವಿಟ್ಟು ನಂಗೂ ಹೇಳಿ!

ಇಲ್ಲಿ ನನಗೆ ಅತ್ಯಂತ ಇಷ್ಟವಾದ ಲೆಖನ/ಪುಸ್ತಕ: ಡಾ.ಹೆಚ್.ರಾಮಚಂದ್ರಸ್ವಾಮಿರವರ ಮಹಾಭಾರತಕಥಾಸಂಗ್ರಹ.
ನಾನು ಇಲ್ಲಿ ನಿರಂತರವಾಗಿ ಓದ ಬಯಸುವ ಇನ್ನೊಂದು ವಿಭಾಗವೆಂದರೆ ಅನುಪಮಾ ನಿರಂಜನರವರ ದಿನಕ್ಕೊಂದು ಕಥೆ.
ಮಾಹಿತಿಯನ್ನು ನೀಡುವ ಮೂಲಕ ಮನಸೂರೆ ಮಾಡಿರುವ ಇನ್ನೊಂದು ಪ್ರಮುಖವಿಭಾಗವೆಂದರೆ 1918 ರಲ್ಲಿ ಪ್ರಕಟವಾದ ವಿಜ್ಞಾನ ಮಾಸಪತ್ರಿಕೆ, ಸಂಪಾದಕರು: ಬೆಳ್ಳಾವೆ ವೆಂಕಟನಾರಾಣಪ್ಪನವರು ಮತ್ತು ಎನ್. ವೆಂಕಟೇಶಯ್ಯಂಗಾರ್ಯರು.

ಇದೆಲ್ಲಕ್ಕೂ ಮಿಗಿಲಾಗಿ ಇಲ್ಲಿನ ಲೇಖನಗಳಲ್ಲಿ ಪದಗಳನ್ನು ಹುಡುಕಲು ಓಸೀಆರ್ ತಂತ್ರಜ್ಞಾನದ ಸಹಾಯವೂ ದೊರೆಯುತ್ತದೆ. ಓಸೀಆರ್ ತಂತ್ರಜ್ಞಾನದ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ವಿಸ್ತೃತ ಬರಹವನ್ನೇ ಬರೆಯುತ್ತೇನೆ. ಅಷ್ಟರೊಳಗೆ ನೀವೇ ಇದರ ಬಗ್ಗೆ ಹುಡುಕುವ ಪ್ರಯತ್ನ ಮಾಡಿ. ಈ ವಿಷಯದಲ್ಲಿ ನಿಮ್ಮ ಕುತೂಹಲವನ್ನು ಸ್ವಲ್ಪ ಉಳಿಸುವ ಆಸೆ ನನ್ನದು.

ಇದೆಲ್ಲದರೊಟ್ಟಿಗೆ ನಾನು ಬೇಳೂರು ಸುದರ್ಶನ ಅವರಿಗೆ ಹೃತ್ಪೂರ್ವಕ ವಂದನೆಗಳನ್ನರ್ಪಿಸಲು ಬಯಸುತ್ತೇನೆ. ಏಕೆಂದರೆ ಇವರು ನನಗೆ ಕನ್ನಡದ ಓಸೀಆರ್ ತಂತ್ರಜ್ಞಾನಕ್ಕೆ ಕೆಲಸ ಮಾಡುತ್ತಿರುವ ಮೈಸೂರಿನ ಯೋಗಾನಂದ ಅವರನ್ನು ಪರಿಚಯಿಸಿದರು. ಯೋಗಾನಂದರವರು ಇನ್ನೂ ಅನೇಕ ಪುಸ್ತಕಗಳನ್ನು ನನ್ನ ಹಾಗು ಎಲ್ಲರ ವಿಶೇಷವಾಗಿ ಎಲ್ಲಾ ಅಂಧರ ಅನುಕೂಲಕ್ಕಾಗಿ Electronic book ರೂಪಕ್ಕೆ ಪರಿವರ್ತಿಸಿಕೊಡುವ ಭರವಸೆನೀಡಿದ್ದಾರೆ. ಕಣಜ ಜಾಲತಾಣದ ಸಮನ್ವಯಕಾರರಾಗಿರುವ ಬೇಳೂರು ಸುದರ್ಶನ ಅವರ ಬಗ್ಗೆಹಾಗು ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಆಗಿರುವ ಕನ್ನಡ ಓಸೀಆರ್ ತಂತ್ರಜ್ಞಾನವನ್ನು ತಯಾರಿಸುತ್ತಿರುವ ಯೋಗಾನಂದ ಅವರುಗಳ ಬಗ್ಗೆ ಮುಂದೊಂದು ದಿನ ಖಂಡಿತಾ ಬರೆಯುತ್ತೇನೆ. ಈಗ ಸಮಯ ಬಹಳವಾಯಿತು. ಇತ್ತೀಚೆಗೆ ಮೊದಲಿನಂತೆ ಬೇಕಾದಷ್ಟು ಸಮಯ ನನಗೆ ಸಿಗುತ್ತಿಲ್ಲ. ಬೇರೆ ಬೇರೆ ಕೆಲಸಗಳಲ್ಲಿ ಹಾಗೂ ಉನ್ನತ ವಿದ್ಯಾಭ್ಯಾಸಗಳಲ್ಲಿ ತೊಡಗಿದ್ದೇನೆ. ಅವನ್ನೂ ಶೀಘ್ರದಲ್ಲಿ ಬರೆಯುತ್ತೇನೆ.

Monday, June 20, 2011

ಅಂಧರ ಬಾಳಿಗೆ ಬೆಳಕಾಗಬಲ್ಲ ‘ಸ್ಟೆಮ್ ಸೆಲ್‘ ತೆರಪಿ

Dear all, Here I am posting a reproduced article bassed on an article in a popular site. This article explains about the use of stem cells for treating various retinal diseases.

----------------------------------------------
ಸ್ಟೆಮ್ ಸೆಲ್ (Stem Cell) ಅನ್ನು ಬಳಸಿ ವಂಶವಾಹಿಗಳಿಂದ ಅನುವಂಶೀಯವಾಗಿ ಬರುವ ಒಂದು ಬಗೆಯ ಅಂಧತ್ವವನ್ನು ಸರಿಪಡಿಸುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಈ ಸಂಶೋಧನೆಯ್ಯು ಅಕ್ಷಿಪಟಲ (Retina) ಸಂಬಂದಿ ಕಾಯಿಲೆಗಳಿಗೆ ಮುಂದಿನ ದಿನಗಳಲ್ಲಿ ಒಂದು ಶಾಶ್ವತ ಚಿಕಿತ್ಸೆಯನ್ನು ನೀಡುವ ಭರವಸೆಯನ್ನು ಮೂಡಿಸಿದೆ. ಮ್ಯಾಕ್ಯುಲಾರ್ ಡಿಜನರೇಶನ್ (Macular degeneration), ರೆಟಿನೈಟಿಸ್ ಪಿಗ್‌ಮೆಂಟೋಸ (Retinitis pigmentosa) ಇಂತಹ ಖಾಯಿಲೆಗಳಿಗೆ ಲಕ್ಷಾಂತರ ಮಂದಿ ಬಲಿಯಾಗಿ ಕುರುಡರಾಗುತ್ತಿದ್ದಾರೆ. ಇಂಥವರ ಜೀವನದಲ್ಲಿ ಮತ್ತೆ ಬೆಳಕು ಮೂಡುವ ಆಶಯವನ್ನು ಈ ಸಂಶೋಧನೆ ಮೂಡಿಸಿದೆ.

ಸ್ಟೆಮ್‌ಸೆಲ್ ಸಂಶೋಧನೆಗಳ ಕುರಿತಾಗಿರುವ ಒಂದು ಪ್ರತಿಷ್ಠಿತ ಆನ್‌ಲೈನ್ ಜರ್‌ನಲ್‌ನಲ್ಲಿ ಈ ಕುರಿತ ಸಂಶೋಧನೆಯ ವಿವರಗಳು ಜೂನ್ ೧೫ ರಂದು ಪ್ರಕಟಗೊಂಡಿವೆ. ಈ ಸಂಶೋಧನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್ (induced pluripotent stem) (iPS) ಸೆಲ್‌ಗಳನ್ನು ಬಳಸಿ ಒಂದು ವಿರಳ ಅನುವಂಶೀಯ ಖಾಯಿಲೆಯಾದ ಜೆಯ್‌ರೇಟ್ ಆಟ್ರಫಿ (gyrate atrophy) ಅನ್ನು ಗುಣಪಡಿಸಲಾಗಿದೆ. ಈ ಕಾಯಿಲೆಯು ‘ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ (retinal pigment epithelium) (RPE) ಸೆಲ್‌ಗಳನ್ನು ನಾಶ ಪಡಿಸಿ ಅಂಧತ್ವವನ್ನುಂಟು ಮಾಡುತ್ತದೆ. ಇವುಗಳು ರೆಟಿನಾದಲ್ಲಿನ ‘ಫೋಟೋ ರಿಸೆಪ್ಟಾರ್‘ ಸೆಲ್‌ಗಳ ಕಾರ್ಯನಿರ್ವಹಣೆಯಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತವೆ. ಈ ಫೋಟೋ ರಿಸೆಪ್ಟಾರ್ ಸೆಲ್‌ಗಳು ರೆಟಿನಾದ ಮೇಲೆ ಬಿದ್ದ ಬೆಳಕನ್ನು ಸಂಕೇತ ರೂಪಕ್ಕೆ ಪರಿವರ್ತಿಸಿ ಮೆದುಳಿಗೆ ಕಳಿಸುವಲ್ಲಿ ನೆರವಾಗುತ್ತವೆ. ಈ ಸಂಕೇತಗಳನ್ನು ಮೆದುಳು ಗ್ರಹಿಸಿ ಅವುಗಳನ್ನು ಅರ್ಥೈಸಿಕೊಳ್ಳುತ್ತದೆ. ಆದರೆ ‘ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ ಸೆಲ್‌ಗಳ ತೊಂದರೆಯಿಂದಾಗಿ ಫೋಟೋ ರಿಸೆಪ್ಟಾರ್ ಸೆಲ್‌ಗಳು ಸರಿಯಾಗಿ ಕೆಲಸ ಮಾಡದೇ ಕುರುಡತ್ವ ಉಂಟಾಗುತ್ತದೆ. ಹಾಳಾದ ‘ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ ಸೆಲ್‌ಗಳನ್ನು ಪುನರ್‌ನಿರ್ಮಾಣ ಮಾಡುವುದರಿಂದ ಈ ಕಾಯಿಲೆಯಿಂದಾಗಿ ಅಂಧನಾದ ವ್ಯಕ್ತಿಯ ಜೀವನದಲ್ಲಿ ಮತ್ತೆ ಬೆಳಕು ಮೂಡಿಸಬಹುದು.

"ನಾವು ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್ ಸೆಲ್‌ಗಳನ್ನು ತಯಾರಿಸಿ, ಈ ಕಾಯಿಲೆಗೆ ಕಾರಣವಾದ ಒಂದು ಬಗೆಯ ವಂಶವಾಹಿ ತೊಂದರೆಯನ್ನು ಸರಿಪಡಿಸಿ, ಈ ಇಂಡ್ಯೂಸ್‌ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್‘ ಸೆಲ್‌ಗಳು ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ ಸೆಲ್‌ಗಳಾಗಿ ಬೆಳೆಯುವಂತೆ ಮಾಡಿದಾಗ ಈ ಸೆಲ್‌ಗಳು ಸ್ವಾಬಾವಿಕವಾಗಿ ಕಾರ್ಯನಿರ್ವಹಿಸಿದವು. ಈ ಫಲಿತಾಂಶವು ತುಂಬಾ ಉತ್ತೇಜನಕಾರಿಯಾದುದು ಯಾಕೆಂದರೆ ಸರಿಯಾಗಿಲ್ಲದ ಒಂದು ಸಂಕೀರ್ಣ ವ್ಯವಸ್ಥೆಯನ್ನೂ ಸಹ ನಾವು ಸರಿಪಡಿಸಬಹುದು, ಅಲ್ಲದೇ ಭವಿಷ್ಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಥವಾ ನಿಶ್ಪ್ರಯೋಜಕವಾಗಿರುವ ರೆಟಿನಾದ ಸೆಲ್‌ಗಳನ್ನೂ ಈ ಚಿಕಿತ್ಸೆಯಿಂದ ಸರಿಪಡಿಸಬಹುದು" ಎಂದು ಅಧ್ಯಯನದ ನೇತೃತ್ವ ವಹಿಸಿರುವ ಕೋಷ ಜೀವಶಾಸ್ತ್ರಜ್ಞ ಹಾಗು ಇಂಡ್ಯಾನ ವಿಶ್ವವಿದ್ಯಾನಿಲಯದ ‘ಸ್ಕೂಲ್ ಆಫ್ ಸೈನ್ಸ್‘ ನ ಜೀವಶಾಸ್ತ್ರದ ಸಹಾಯಕ ಪ್ರೊಫೆಸರ್ ಡಾ|| ಜೇಸನ್ ಮೇಯರ್ ತಿಳಿಸಿದರು.

ಮ್ಯಾಕ್ಯುಲಾರ್ ಡಿಜನರೇಶನ್ ಒಂದು ಸಾಮಾನ್ಯ ಕಣ್ಣಿನ ಕಾಯಿಲೆಯಾಗಿದ್ದು ವಿಶ್ವದಲ್ಲಿನ ಸುಮಾರು ೨೫-೩೦ ಮಿಲಿಯನ್ ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸುಮಾರು ೧.೫ ಮಿಲಿಯನ್ ಜನರು ರೆಟಿನೈಟಿಸ್ ಪಿಗ್‌ಮೆಂಟೋಸ ರೋಗದಿಂದ ಬಳಲುತ್ತಿದ್ದಾರೆ.

ಈ ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್‘ ಸೆಲ್‌ಗಳನ್ನು ಅದೇ ರೋಗಿಗಳಿಂದ ಪಡೆದುಕೊಳ್ಳುವುದರಿಂದಾಗಿ ಮುಂದೆ ಯಾವುದೇ ‘ಟ್ರಾನ್ಸ್‌ಪ್ಲಾಂಟ್ ರಿಜಕ್ಷನ್‘ ಅಂತಹ ಸಮಸ್ಯೆಗಳು ತಲೆದೋರುವುದಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ವಿಜ್ಞಾನದ ಇಂತಹ ಅವಿಷ್ಕಾರಗಳು ಮನುಕುಲದ ಅನೇಕ ಸಮಸ್ಯೆಗಳನ್ನು ಬಹುಮಟ್ಟಿಗೆ ನಿವಾರಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ. ಇನ್ನೂ ಹೆಚ್ಚು ಹೆಚ್ಚು ಇಂತಹ ಸಂಶೋಧನೆಗಳು ನಡೆದು ಬೆಳಕನ್ನೇ ಕಾಣದವರ ಬಾಳನ್ನು ಬೆಳಗಲಿ ಎಂದು ಆಶಿಸೋಣ ಅಲ್ಲವೇ?

ಕೃಪೆ: ಸೈನ್ಸ್‌ಡೇಲಿ

Sunday, June 12, 2011

ಬಾಬಾ ರಾಮದೇವ್ ಕುರಿತು ದಿಗ್ವಿಜಯ್ ಕುಹಕ

ನಮಸ್ಕಾರ, ತುಂಬಾ ದಿನಗಳ ನಂತರ ಮತ್ತೆ ಬರೆಯುತ್ತಿದ್ದೇನೆ. ಜೂನ್ ೪ ರಂದು ದಟ್ಶ್‌ಕನ್ನಡದಲ್ಲಿ ಪ್ರಖಟವಾದ ನನ್ನ ಲೇಖನವನ್ನು ತುಸು ತಡವಾಗಿ ಇಲ್ಲಿಊ ಪ್ರಖಟಿಸುತ್ತಿದ್ದೇನೆ.

Hi, In this Article, I expressed my anger slightly regarding remarks made by Digvijay Singh about Baba Ramdev.

ಬಾಬಾ ರಾಮದೇವ್‌ಗೆ ಹೆದ್ರಲ್ಲ, ಅವರು ಸನ್ಯಾಸಿಯೇ ಅಲ್ಲ: ದಿಗ್ವಿಜಯ್  
ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಬಾಬಾ ರಾಮದೇವ್ ಅವರು ಸನ್ಯಾಸಿಯೇ ಅಲ್ಲ, ಅವರೊಬ್ಬ ಉದ್ಯಮಿ ಎಂದು ಟೀಕಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಅವರ ಉಪವಾಸಕ್ಕೇನೂ ನಾವು ಹೆದರುವುದಿಲ್ಲ ಎಂದಿದ್ದಾರೆ.
"ಉಪವಾಸ ಸತ್ಯಾಗ್ರಹಗಳಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿಲ್ಲ. ಕಾನೂನಿನಿಂದ ಮಾತ್ರ ಇದು ಸಾಧ್ಯ" ಎಂದು ಉಪವಾಸ ಸತ್ಯಾಗ್ರದ ಪಿತಾಮಹ ಎಂದೇ ಲೋಕದೆಲ್ಲೆಡೆ ಪ್ರಸಿದ್ಧವಾಗಿರುವ ಮಹಾತ್ಮ ಗಾಂಧೀಜಿಯವರಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ನಾವೇನಾದರೂ ಬಾಬಾ ಅವರಿಗೆ ಹೆದರಿದ್ದಿದ್ದರೆ, ಪಕ್ಷವು ಅವರನ್ನೇ ಕಂಬಿಗಳ ಹಿಂದೆ ತಳ್ಳಿ ಬಿಡುತ್ತಿತ್ತು. ಬಾಬಾ ಈಗ ಉದ್ಯಮಿಯೇ ಆಗಿದ್ದು, ಬಾಬಾ ರಾಮದೇವ್ ಅವರು ಯೋಗ ಶಿಬಿರವೊಂದಕ್ಕೆ 50 ಸಾವಿರ ರೂಪಾಯಿ ಶುಲ್ಕ ವಿಧಿಸುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಅಲ್ಲಾ ಸ್ವಾಮಿ, ದಿಗ್ವಿಜಯ್ ಸಿಂಗ್‌ಅವರೇ, ಉದ್ಯಮಿಗಳೇನಾದರೂ ಕಪ್ಪು ಹಣವನ್ನು ವಾಪಾಸು ತರಿಸಲು ಸರಕಾರದ ಮೇಲೆ ಒತ್ತಡ ಹಾಕಬಾರದೇ? ಅವರಿಗೆ ಉಪವಾಸ ಸತ್ಯಾಗ್ರಹ ಮಾಡುವ ಹಕ್ಕಿಲ್ಲವೇ? ಬಾಬಾ ರಾಮದೇವ್ ಸನ್ಯಾಸಿಯೇ ಅಲ್ಲಾ ಉದ್ಯಮಿ ಎಂದು ಕರೆಯುವ ನೀವು ಅಂದರೆ ರಾಜಕಾರಣಿಗಳೂ ಈಗ ಉದ್ಯಮಿಗಳಾಗಿಲ್ಲವೇ? ನೀವು ಜನ ಸೇವಕರೇ?
ನನಗನಿಸುವ ಮಟ್ಟಿಗೆ ಬಾಬಾ ರಾಮದೇವ್ ಒಬ್ಬ ಭಾರತೀಯ ಸಂಸ್ಕೃತಿಯ ಪಾಲಕ ಹಾಗೂ ನಿಜವಾದ ಪ್ರತಿಪಾದಕರಂತೆ ಕಾಣುತ್ತಾರೆ. ಹಾಗಂತ ಬಾ ಬಾ ಅವರು ಒಬ್ಬ ಮಹಾತ್ಮ, ಎಲ್ಲಾ ಆರೋಪಗಳಿಂದ ಮುಕ್ತ, ಇತ್ಯಾದಿ-ಇತ್ಯಾದಿ ಎಂದು ನಾನು ಹೇಳಬಯಸುವುದಿಲ್ಲ. ಆದರೆ ಅವರೊಬ್ಬ ನಿಜವಾದ ಯೋಗ ಗುರು, ಮತ್ತು ಸಮಾಜದ ಬಗ್ಗೆ ಕಿಂಚಿತ್ ಕಳಕಳಿ ಇರುವ ವ್ಯಕ್ತಿ. ದಿಗ್ವಿಜಯ್ ಹೇಳಿದ ಹಾಗೆ ಯೋಗ ಶಿಬಿರಗಳಿಗೆ ರಾಮದೇವ್ ಹಣ ಪಡೆಯುವ ವಿಚಾರ ನನಗೆ ಗೊತ್ತಿಲ್ಲ; ಯೇಕೆಂದರೆ, ನನ್ನ ಸುತ್ತ-ಮುತ್ತ ನಾನು ಅನೇಕ ಯೋಗ ತರಬೇತಿ ನೀಡುವವರನ್ನು ನೋಡಿದ್ದೇನೆ. ಅವರಲ್ಲಿ ಹೆಚ್ಚಿನ ಜನ ಬಾಬಾ ರಾಮದೇವ್ ಅವರ ಪತಂಜಲಿ ಯೋಗ ಆಶ್ರಮದಿಂದಲೇ ಕಲಿತು ಬಂದವರು. ಅವರಲ್ಲಿ ಕೆಲವರು ಉಚಿತವಾಗಿ ಯೋಗ ಕಲಿಸುತ್ತಾರೆ. ಇದನ್ನು ನೋಡಿದರೆ ದಿಗ್ವಿಜಯ್ ಮಾತನ್ನು ನಂಬಲು ಸಾದ್ಯವಿಲ್ಲ.
ಮತ್ತೊಂದು ಪ್ರಮುಖ ವಿಚಾರವೆಂದರೆ, ಉಪವಾಸ ಸತ್ಯಾಗ್ರಹಗಳು ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಯಾವುದೇ ಪಾತ್ರವಹಿಸುವುದಿಲ್ಲವೆಂದಾದರೆ, ಅವು ಒಂದು ದೇಶ ಸ್ವತಂತ್ರಪಡೆಯುವುದಕ್ಕೆ ಹೇಗೆ ನೆರವಾಗಬಲ್ಲವು? ಒಂದು ಕಾಲಕ್ಕೆ ಮಹಾತ್ಮಾ ಗಾಂಧಿಯವರು ಮುನ್ನಡೆಸಿದ ಕಾಂಗ್ರೆಸ್ ಪಕ್ಷದಲ್ಲಿ ಒಂದು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಇಂತಹಾ ಹೇಳಿಕೆ ನೀಡಲು ದಿಗ್ವಿಜಯ್ ಸಿಂಗ್ ಅವರಿಗೆ ನಾಚಿಕೆಯಾಗುವುದಿಲ್ಲವೇ? ಈ ಉಪವಾಸ ಸತ್ಯಾಗ್ರಹ ಮಹಾತ್ಮಾ ಗಾಂಧಿಯವರ ಕೂಸಲ್ಲವೇ? ಇನ್ನು ಕಾಂಗ್ರೆಸ್ ಪಕ್ಷ ಬಾಬಾ ಅವರಿಗೆ ಹೆದರಿದ್ದರೆ ಅವರನ್ನೇ ಜೈಲಿಗೆ ಕಳಿಸುತ್ತಿದ್ದೆವು ಎಂಬ ದಿಗ್ವಿಜಯ್ ಮಾತು ದುರಹಂಕಾರದ ಪರಮಾವದಿ ಅಲ್ಲವೇ? ಒಂದು ವೇಳಿ ಹಾಗೆ ಮಾಡಿದರೆ ಬ್ರಿಟೀಷ್ ಸರಕಾರಕ್ಕೂ ಭಾರತೀಯ ಕಾಂಗ್ರೆಸ್ ಸರಕಾರಕ್ಕೂ ನಡುವೆ ಏನು ವ್ಯತ್ಯಾಸ?

ರಾಮದೇವ್ ಅವರಿಗೆ ಆರ್‌ಎಸ್‌ಎಸ್ ತನ್ನ ಬೆಂಬಲ ವ್ಯಖ್ತಪಡಿಸಿರುವುದು ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ಯಾರೋ ಒಬ್ಬರನ್ನೋ ಅಥವಾ ಒಂದು ವರ್ಗವನ್ನೋ ತೃಪ್ತಿಪಡಿಸಲು ಮನಬಂದಂತೆ ಹೇಳಿಕೆಗಳನ್ನು ನೀಡುವುದು ಕೆಲವು ಕಾಂಗ್ರೆಸ್ ನಾಯಕರ ಹಳೆಯ ಚಾಳಿಯೂ ಹೌದು. ಅದಲ್ಲದೇ ಮೂಲೆಗುಂಪಾಗುತ್ತಿರುವ ಇಂತಹ ಕೆಲವರು ತಮ್ಮ ಅಸ್ತಿತ್ವ ತೋರಿಸಿಕೊಳ್ಳಲೂ ಸಹ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಎಲ್ಲೋ ಒಂದು ಕಡೆ ಅವರು ತಮ್ಮ ಉಳಿವಿಗೆ ಇವುಗಳೇ ಕಾರಣ ಎಂಬ ಭ್ರಮೆಯಲ್ಲಿದ್ದಂತೆ ತೋರುತ್ತದೆ ಅಲ್ಲವೇ?


ಇನ್ನು ಕಾಂಗ್ರೆಸ್ ಅಥವಾ ಯುಪಿಏ ಬಾಬಾ ಅವರ ಹೋರಾಟಕ್ಕೆ ಹೆದರದೇ ಇದ್ದರೆ, ಕೇಂದ್ರ ಸರಕಾರವೇಕೆ ನಾಲ್ಕು ಮಂದಿ ಸಚಿವರು, ಸಂಪುಟ ಕಾರ್ಯದರ್ಶಿಗಳನ್ನೆಲ್ಲಾ
ವಿಮಾನ ನಿಲ್ದಾಣಕ್ಕೆ ಕಳುಹಿಸಿ ಸ್ವಾಗತಿಸಬೇಕಿತ್ತು ಎಂಬುದು ಅರ್ಥವಾಗುತ್ತಿಲ್ಲ.

ಈ ಮರ್ಕಟ ಮನಸ್ಸಿನ ರಾಜಕಾರಣಿಗಳು ಇನ್ನಾದರು ಇಂತಹ ದುರ್ಬುದ್ಧಿಯನ್ನು ಬಿಟ್ಟು ಜನಸೇವೆ ಮತ್ತು ದೇಶಸೇವೆಗಳನ್ನು ಕಿಂಚಿತ್ ಆದರೂ ಮಾಡಲಿ ಎಂದು ಆಶಿಸೋಣ ಅಲ್ಲವೇ?

ಯುಪಿಎ-ಕಾಂಗ್ರೆಸ್ ನಡುವೆ ಸಂಘರ್ಷ
ಈ ನಡುವೆ, ಬಾಬಾ ರಾಮದೇವ್ ಅವರು ಉಜ್ಜೈನಿಯಿಂದ ದೆಹಲಿಗೆ ಬಂದಿಳಿದಾಗ ನಾಲ್ಕು ಮಂದಿ ಮಂತ್ರಿ ಮಹೋದಯರು ವಿಮಾನ ನಿಲ್ದಾಣಕ್ಕೇ ಹೋಗಿ, ಬಾಗಿ ಸ್ವಾಗತಿಸಿರುವುದು ಕಾಂಗ್ರೆಸ್ ಮತ್ತು ಯುಪಿಎ
ಸರಕಾರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ವಿದೇಶದಲ್ಲಿರುವ ಕಪ್ಪು ಹಣದ ವಾಪಸಾತಿಗೆ ಒತ್ತಾಯಿಸಿ ಬಾಬಾ ರಾಮದೇವ್ ಅವರು ಶನಿವಾರದಿಂದ ನಡೆಸಲಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಕೇಂದ್ರ ಸರಕಾರದಲ್ಲಿ ತೀವ್ರ ಕಳವಳ ಸೃಷ್ಟಿಸಿತ್ತು.
ಈ ಬಗ್ಗೆ ಗುರುವಾರ ಸರಕಾರದ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಬಾಬಾ ಮನವೊಲಿಕೆ ನಿಟ್ಟಿನಲ್ಲಿ ನಾಲ್ಕು ಮಂದಿ ಹಿರಿಯ ಸಚಿವರಾದ ಪ್ರಣಬ್ ಮುಖರ್ಜಿ, ಕಪಿಲ್ ಸಿಬಲ್, ಪ್ರಬೋಧ್ ಕಾಂತ್ ಸಹಾಯ್
ಮತ್ತು ಪಿ.ಕೆ.ಬನ್ಸಾಲ್ ಜತೆಗೆ ಸಂಪುಟ ಕಾರ್ಯದರ್ಶಿಗಳನ್ನೆಲ್ಲರನ್ನೂ ವಿಮಾನ ನಿಲ್ದಾಣಕ್ಕೆ ಕಳುಹಿಸಿರುವುದು ಯುಪಿಎಯಲ್ಲಿ ಅಸಮಾಧಾನ ಏಳಲು ಕಾರಣವಾಗಿದೆ.

ಬಾಬಾ ಅವರಿಗೆ ಇಷ್ಟು ಭರ್ಜರಿಯಾಗಿ ಸ್ವಾಗತ ಕೋರಿರುವುದರ ಬಗ್ಗೆ ಟೀಕೆಗಳು ಕೇಳಿಬರತೊಡಗಿದಂತೆ, ಈ ವಿಷಯದಿಂದ ದೂರ ಸರಿಯಲು ಕಾಂಗ್ರೆಸ್ ಪ್ರಯತ್ನಿಸಿತು. ಮಂತ್ರಿಗಳೇ ವಿಮಾನ ನಿಲ್ದಾಣಕ್ಕೆ
ಹೋಗುತ್ತಾರೆಂಬ ಸಂಗತಿ ನಮಗೆ ಗೊತ್ತೇ ಇರಲಿಲ್ಲ ಎಂದಿವೆ ಕಾಂಗ್ರೆಸ್ ಮೂಲಗಳು.

ಆರೆಸ್ಸೆಸ್ ಕೂಡ ಬೆಂಬಲ...
ಕಾಂಗ್ರೆಸ್‌ನ ಚಿಂತೆಗೆ ಕಾರಣವಾಗಿರುವ ಸಂಗತಿಯೆಂದರೆ ಬಾಬಾ ರಾಮದೇವ್ ಹೋರಾಟಕ್ಕೆ ಆರೆಸ್ಸೆಸ್ ಕೂಡ ಬೆಂಬಲ ಘೋಷಿಸಿರುವುದು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಆರೆಸ್ಸೆಸ್ ಕಾರ್ಯಕರ್ತರೆಲ್ಲರೂ
ಬಾಬಾ ರಾಮದೇವ್ ಜೊತೆಗೆ ಸೇರುತ್ತಾರೆ ಎಂದು ಆರೆಸ್ಸೆಸ್ ವಕ್ತಾರ ರಾಮಮಾಧವ್ ಘೋಷಿಸಿದ್ದಾರೆ.

ಈ ಕಾರಣಕ್ಕೆ ಇಂದು ತುರ್ತು ಸಭೆ ಸೇರಿರುವ ಉನ್ನತ ಮಟ್ಟದ ನಾಯಕರು, ಈ ವಿಷಯದ ಕುರಿತು ಜಾಗರೂಕ ಹೆಜ್ಜೆಯಿಡುವ ಕುರಿತು ಚಿಂತಿಸಲಿದ್ದಾರೆ.

Saturday, April 2, 2011

Third eye technical voluntary group (ತರ್ಡ್ ಐ ಟೆಕ್ನಿಕಲ್ ವಾಲೆನ್ಟರಿ ಗ್ರುಪ್)

Dear all, I am very happy to introduce you to the Third Eye technical voluntary group, a project of Keerthana charitable trust, which committed to improve the lives of visually impaireds and disableds with the help of technology. We are developing aids and softwares for visually impaireds and we are working closely with the open source software developers. You can visit our website for more information.

ತರ್ಡ್ ಐ ಟೆಕ್ನಿಕಲ್ ವಾಲೆನ್ಟರಿ ಗ್ರೂಪ್ ಎನ್ನುವುದು ಕೀರ್ತನಾ ಚಾರಿಟೆಬಲ್ ಟ್ರಷ್ಟಿನ ಒಂದು ಹೆಮ್ಮೆಯ ಪ್ರಾಜೆಕ್ಟ್. ನಾವು (TVG) ಅಂಧರ ಮತ್ತು ಇತರೆ ಅಂಗವಿಕಲರ ಜೀವನವನ್ನು ತಂತ್ರಞಾನದ ಸಹಾಯದಿಂದ ಉತ್ತಮಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗೆ ನಮ್ಮ ವೆಬ್‌ಸೈಟನ್ನು ನೋಡಿ. ನಾವು ಈಗಾಗಲೆ ಅನೇಕ ಸಾಫ್ಟ್ವೇರ್ ತಯಾರಿಸುತ್ತಿದ್ದೇವೆ ಹಾಗು ಅನೇಕ ಓಪನ್‌ಸೋರ್ಸ್ ಸಾಫ್ಟ್‌ವೇರ್ ತಯಾರಕರ ಜೊತೆ ಸಂಪರ್ಕದಲ್ಲಿದ್ದೇವೆ. ನಿಮಗೆ ಇದರಲ್ಲಿ ಆಸಕ್ತಿ ಇದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

Sunday, March 27, 2011

ನಾವು (ಭಾರತೀಯರು) ಭಾರತೀಯರೇ?

We (Indians) are we? First read then think.

Summary: In this article, the author examins the concept of Unity in diversity of India, and he carefully observes some threats to the integrity of United India.

ನಾವು (ಭಾರತೀಯರು) ಭಾರತೀಯರೇ? ಯೋಚಿಸಿ,; ಈಕೆಳಗಿನ ಸಂಭಾಷಣೆ ಓದಿ.

ಒಮ್ಮೆ ಒಬ್ಬ ಅಮೆರಿಕನ್ ಪ್ರಜೆ ಭಾರತಕ್ಕೆ ಬಂದಿದ್ದನು. ಅವನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿ ಇಲ್ಲಿನ ಸೌಂದರ್ಯವನ್ನು ಸವಿದನು. ಅದರ ಜೊತೆಯಲ್ಲಿಯೇ ಆಯಾ ಸ್ಥಳಗಳ ಕುರಿತು ಸ್ಥಳ ಚರಿತ್ರೆ, ಸಂಬಂಧಪಟ್ಟ ಪೌರಾನಿಕ ಹಿನ್ನೆಲೆ, ಮತ್ತು ಆ ಸ್ಥಳದ ಈಗಿನ ಮಹತ್ವ ಹೀಗೆ ಆ ಸ್ಥಳಗಳ ಬಗ್ಗೆ ಅಗತ್ಯ ಮಾಹಿತಿ ಕಲೆಹಾಕಿದನು. ಅವನಿಗೆ ಭಾರತದ ಅಗಾಧ ಪ್ರಾಕೃತಿಕ ಹಾಗು ಮಾನವ ಸಂಪನ್ಮೂಲದ ಬಗೆಗೂ ಅಪಾರ ಮಾಹಿತಿ ದೊರಕಿತು. ಅವನು ಭಾರತ ಪ್ರವಾಸ ಮುಗಿಸಿ ಸಂತೃಪ್ತನಾಗಿ ತನ್ನ ತಾಯ್ನಾಡಿಗೆ ಮರಳಿದನು. ಒಂದು ದಿನ ಅಮೇರಿಕಾದಲ್ಲಿ ಅವನಿಗೆ ಅವನ ಒಬ್ಬ ಭಾರತೀಯ ಸ್ನೇಹಿತ ಸಿಕ್ಕಿದನು. ಸ್ನೇಹಿತ: ‘ನಮ್ಮ ದೇಶ ಹೇಗಿದೆ?‘ ಅಮೆರಿಕನ್: ‘ಭಾರತ ಒಂದು ಸುಂದರ ಹಾಗು ಸಮೃದ್ಧ ದೇಶ. ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದೆ; ಅಲ್ಲದೇ ಅತ್ಯಂತ ಶ್ರೀಮಂತ ಪುರಾತನ ಇತಿಹಾಸವನ್ನೂ ಹೊಂದಿದೆ.‘ ಈ ಮಾತು ಕೇಳಿ ಆ ಭಾರತೀಯ ಸ್ನೇಹಿತನಿಗೆ ತುಂಬಾ ಸಂತೋಷವಾಯಿತು. ಆಗ ಅವನು ಹೆಮ್ಮೆಯಿಂದ ‘ಭಾರತೀಯರ ಬಗ್ಗೆ ನಿನ್ನ ಅಭಿಪ್ರಾಯವೇನು?‘ ಅದಕ್ಕೆ ಅಮೆರಿಕನ್ ಆಶ್ಚರ್ಯದಿಂದ ‘ಭಾರತೀಯರು!? ಅವರು ಯಾರು? ನನಗೆ ಒಬ್ಬ ಭಾರತೀಯನು ಸಿಕ್ಕಲಿಲ್ಲ!‘ ಎಂದನು. ಅದಕ್ಕೆ ಸ್ನೇಹಿತ: ‘ಇದೇನಿದು ನಿನ್ನ ಹುಚ್ಚಾಟ? ಭಾರತದಲ್ಲಿ ಭಾರತೀಯರಲ್ಲದೇ ಬೇರೆ ಯಾರು ನಿನಗೆ ಸಿಗಲು ಸಾದ್ಯ?‘ ಎಂದು ತುಸು ಗಡುಸಾಗಿಯೇ ಕೇಳಿದನು. ಅದಕ್ಕೆ ಅಮೆರಿಕನ್ ಶಾಂತವಾಗಿಯೇ, ‘ಕಾಶ್ಮೀರದಲ್ಲಿ ಕಾಶ್ಮೀರಿ, ಪಂಜಾಬಿನಲ್ಲಿ ಪಂಜಾಬಿ, ಬಿಹಾರದಲ್ಲಿ ಬಿಹಾರಿ, ಮಹಾರಾಷ್ಟ್ರದಲ್ಲಿ ಮರಾಠ, ರಾಜಸ್ಥಾನದಲ್ಲಿ ಮಾರ್ವಾಡಿ, ಬಂಗಾಳದಲ್ಲಿ ಬಂಗಾಳಿ, ತಮಿಳುನಾಡಿನಲ್ಲಿ ತಮಿಳ, ಕರ್ನಾಟಕದಲ್ಲಿ ಕನ್ನಡಿಗ; ಇವರೆಲ್ಲರ ಜೊತೆ ಒಬ್ಬ ಹಿಂದೂ, ಮುಸಲ್ಮಾನ, ಸಿಖ್, ಕ್ರೈಸ್ತ, ಜೈನ, ಹೀಗೆ ಅನೇಕರನ್ನು ನೋಡಿದೆ; ಆದರೆ ನೀನು ಹೇಳಿದ ಭಾರತೀಯರು ಮಾತ್ರ ಯಾರೂ ಸಿಗಲಿಲ್ಲ.

ಮೇಲಿನ ಸಂಭಾಷಣೆ ಎಷ್ಟು ಗಂಭೀರವಾಗಿದೆ ಎಂದು ಒಮ್ಮೆ ಯೋಚಿಸಿ ನೋಡಿ. ಇದು ಸತ್ಯವಲ್ಲವೇ? ಭಾರತದ ಈಗಿನ ಪರಿಸ್ಥಿತಿ ಹೀಗಾಗಿರಲು ಏನು ಕಾರಣ ಎನ್ನುವುದು ನಮಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಒಂದು ಕಡೆ ನಾವು ವೈವಿಧ್ಯತೆಯಲ್ಲಿ ಏಕತೆ ಇರುವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ದುರದೃಷ್ಟಕ್ಕೆ ಬರೀ ವೈವಿಧ್ಯತೆ ಮಾತ್ರ ಉಳಿದುಕೊಂಡು ಏಕತೆ ಕಡಿಮೆಯಾಗುತ್ತಿದೆ. ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟವಾದರೂ ನಮ್ಮಲ್ಲಿ ಹೆಚ್ಚುತ್ತಿರುವ ಪ್ರಾಂತೀಯತೆ, ದುರಭಿಮಾನ, ಮತಾಂಧತೆ, ಹಾಗು ಬ್ರಿಟೀಶರು ಬಿತ್ತಿ ಹೋದ ಒಡೆದು ಆಳುವ ನೀತಿ ನಮ್ಮ ರಾಜಕಾರಣಿಗಳಲ್ಲಿ ಬೆಳೆದು ಹೆಮ್ಮರವಾಗಿರುವುದು; ಹೀಗೆ ಹತ್ತು ಹಲವು ಕಾರಣಗಳಿವೆ. ಇದೆಲ್ಲದರ ಬಲಿಪಶುಗಳು ನಾವು ಅಂದರೆ ಭವ್ಯ್ಅ ಭಾರತದ ಸಾಮಾನ್ಯ ಪ್ರಜೆಗಳಾಗುತ್ತಿದ್ದೇವೆ. ಈ ಕಾರ್ಯಕ್ಕೆ ಕೆಲವು ಮತಾಂಧ ಬಾಹ್ಯ ಮತ್ತು ಆಮ್ತರಿಕ ಶಕ್ತಿಗಳೂ ಕುಮ್ಮಕ್ಕು ನೀಡುತ್ತಿವೆ. ಇದೆಲ್ಲವುಗಳಿಂದ ಭಾರತಕ್ಕೆ ಮತ್ತು ಭಾರತೀಯರಿಗೆ ನಷ್ಟವಲ್ಲವೇ? ಆದ್ದರಿಂದ ನಾವು ನೀವೆಲ್ಲರೂ ಮೊದಲು ಭಾರತೀಯರಾಗೋಣ, ನಂತರ ನಮ್ಮ ನಮ್ಮ ಪ್ರಾಂಥ್ಯದವರು ಹಾಗು ಧರ್ಮದವರು, ಅಲ್ಲವೇ?

Translated from an email, some parts have been removed due to sentiments. ©(C) The author.

Wednesday, March 23, 2011

ಒಂದು ಸ್ಪಷ್ಟೀಕರಣ

ಈ ಲೇಖನವನ್ನು ಬರೆಯುತ್ತಿರುವ ಉದ್ದೇಶವೆಂದರೆ, ಪತ್ರಿಕೆಯ್ಒಂದರಲ್ಲಿ ಪ್ರಕಟವಾದ ನನ್ನ ಒಂದು ಅಭಿಪ್ರಾಯದ ಬಗ್ಗೆ ಕೆಲವರಿಗಿದ್ದ ಗೊಂದಲಗಳೂ ಮತ್ತು ಅನುಮಾನಗಳನ್ನು ಪರಿಹರಿಸಲು ಪ್ರಯತ್ನಿಸುವುದು.

೧೭/೦೩/೨೦೧೧ರಂದುನಮ್ಮ ಮನೆಗೆ ಪತ್ರಕರ್ತರು ಬಂದಿದ್ದರು. ಅವರು ಕನ್ನಡ ಓದಬಲ್ಲ ಈಸ್ಪೀಕ್ ತಂತ್ರಾಂಶದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಲು ನನ್ನ ಸಂದರ್ಶನ ಪಡೆದರು. ಸಂದರ್ಶನ ಮುಗಿದ ಮೇಲೆ ನಾನು ಮತ್ತು ಅವರು ಸ್ವಲ್ಪ ಹೊತ್ತು ಸುಮ್ಮನೆ ಲೋಕಾಭಿರಾಮ ಮಾತನಾಡುತ್ತಿದ್ದೆವು.
ಆ ಸಂದರ್ಬದಲ್ಲಿ ಬೇರೆ ಬೇರೆ ವಿಚಾರಗಳನ್ನೂ ನನ್ನ ಜೊತೆ ಚರ್ಚಿಸಿದರು. ಆಗ ತಾನೆ ಮುಗಿದಿದ್ದ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆಯೂ ಕೇಳಿದರು. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ತಿಳಿದುಕೊಂಡ ನಾನು ಸಹಜವಾಗಿಯೇ ಸ್ವಲ್ಪ ಅಸಮಧಾನಗೊಂಡಿದ್ದೆ. ಅವರಿಗೆ ನಾನು ‘ಒಂದು ಭಾಷೆ ಬೆಳೆಯಲು ಅದನ್ನು ಜ್ಞಾನದಿಂದ ತುಂಬಬೇಕೇ ಹೊರತು ಸಮ್ಮೇಳನಗಳಿಂದಲ್ಲ. ಸಮ್ಮೇಳನಗಳನ್ನು ಮಾಡಲು ದುಡ್ಡು ಹಾಕುವ ಬದಲು ಕನ್ನಡ ಪುಸ್ತಕಗಳಿಗೆ ಸಹಾಯ ಧನ ನೀಡಬಹುದಿತ್ತು. ಇಂಗ್ಲೀಶ್ ಆಗಲಿ, ಮತ್ತಿತರೇ ವೇಗದಿಂದ ಬೆಳೆಯುತ್ತಿರುವ ಭಾಷೆಗಳಿಗೇನು ಸಮ್ಮೇಳನ ಮಾಡುತ್ತಾರಾ?‘ ಎಂದು ಕೇಳಿದ್ದೆ. ಇದರ ಬಗ್ಗೆಯೂ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದರ ಅರ್ಥ ನಾನು ಸಮ್ಮೇಳನಗಳ ವಿರೋದಿ ಅಲ್ಲ. ಆದರೆ ಭಾಷೆಯನ್ನು ಬೆಳೆಸುವುದು ಮುಖ್ಯ. ಇದು ಸಮ್ಮೇಳನಗಳಿಂದ ಮಾತ್ರ ಸಾದ್ಯ ಎಂಬ ಕಲ್ಪನೆ ತಪ್ಪು ಎಂದು ಹೇಳಿದೆ ಅಷ್ಟೇ. . ಅಲ್ಲದೇ ಸಾಹಿತ್ಯ ಸಮ್ಮೇಳನ ನಡೆದು ಎರಡೇ ತಿಂಗಳೊಳಗೆ ವಿಶ್ವ ಕನ್ನಡ ಸಮ್ಮೇಳನದ ಅಗತ್ಯ ಏನಿತ್ತು? ಇರಲಿ, ನನ್ನ ವಿಚಾರ ಇಷ್ಟೇ; ಒಂದು ಭಾಷೆ ಬೆಳೆಯಲು ಅದು ಜ್ಞಾನದಿಂದ ಶ್ರೀಮಂತವಾಗಿರಬೇಕು ಮತ್ತೂ ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿರಬೇಕು. ಯಾವುದೋ ಒಂದು ಉದ್ದೇಶವನ್ನು ಈಡೇರಿಸಿಕೊಳ್ಳಲು ಒಂದು ಭಾಷೆಯನ್ನು ಬಳಸಿಕೊಳ್ಳಬಾರದು. ಆಗ ಮಾತ್ರಾ ಅದು ಬೆಳೆಯಲು ಸಾದ್ಯ. ನಾನು ಈ ಲೇಖನವನ್ನು ಬರೆದ ಉದ್ದೇಶವೇನೆಂದರೆ, ಕೆಲವರು ಮೇಲೆ ಹೇಳಿದ ನನ್ನ ನಿಲುವನ್ನು ಠೀಕಿಸಿದ್ದರು, ಹಾಗು ನನ್ನನ್ನು ಸಮ್ಮೇಳನಗಳ ವಿರೋಧಿ ಎಂದೂ ಕರೆದರು. ಇದು ನನ್ನ ಮನಸ್ಸಿಗೆ ಕೊಂಚ ನೋವುಂಟು ಮಾಡಿರುವುದು ಸತ್ಯ; ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಲೂ ನಾನು ಹೇಳುವ ಮಾತು ಇಷ್ಟೇ, ನಮ್ಮ ಭಾಷೆಯಲ್ಲಿ ಹೆಚ್ಚು ಹೆಚ್ಚು ಜ್ಞಾನ ಬಂಡಾರವನ್ನು ತೆರೆದಿಡುವ ಪ್ರಯತ್ನ ನಡೆಯಬೇಕಾಗಿದೆ.. ಇದಕ್ಕೆ ಯಾರಿಗಾದರೂ ನಾನು ಸಹಾಯ ಮಾಡಬಹುದಾದರೆ ನಾನು ಧನ್ಯ. ಈಗ ನಾನು ಕೆಲವು ಸಣ್ಣ ಪುಟ್ಟ ಇಂಗ್ಲೀಶ್ ಕಥೆಗಳನ್ನು ಅನುವಾದಿಸಲು ಪ್ರಯತ್ನ ಪಡುತ್ತಿದ್ದೇನೆ. ಆದರೆ ಇದು ಇನ್ನೂ ಆರಂಭ ಅಷ್ಟೇ. ಮುಂದೆ ಕೆಲವು ಲೇಖನಗಳನ್ನೂ ಅನುವಾದ ಮಾಡುವ ಆಸೆ ಇದೆ. ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಹೇಳಿದ ಈ ಮೇಲಿನ ಅಂಶಗಳು ಯಾರಲ್ಲಿ ಏನು ಅಭಿಪ್ರಾಯವನ್ನು ಉಂಟುಮಾಡಿದರೂ ಅದಕ್ಕೆ ನಾನು ಹೊಣೆಯಲ್ಲ. ಆದರೆ ನನ್ನ ಅಭಿಪ್ರಾಯ ಅಚಲ. ಇದು ಅಹಂಕಾರದ ಮಾತಲ್ಲ, ಇದು ಒಬ್ಬ ಸಾಮಾನ್ಯ ಕನ್ನಡಿಗನ ಕಳಕಳಿಯ ಮಾತು.

ನಿಮ್ಮವ, ಶ್ರೀಧರ್ ಟೀ ಎಸ್.

Sunday, March 20, 2011

ಹಣಮತ

ನನ್ನ ಮಟ್ಟಿಗೆ ಇದೊಂದು ವಿಭಿನ್ನ ಪ್ರಯತ್ನ. ಇಲ್ಲಿ ನನ್ನ ಮನಸ್ಸಿನ ದುಗುಡವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಈ ಲೇಖನವನ್ನು ಪೂರ್ತಿ ಓದಿದ ಮೇಲೆ ಮಾತ್ರಾ ಈ ಶೀರ್ಶಿಕೆಯ ಮಹತ್ವ ನಿಮಗೆ ಅರ್ಥವಾಗುತ್ತದೆ.

ನೀತಿಗೆಟ್ಟ ರಾಜಕಾರಣಿಗಳಿಂದ ದೇಶದ ಮಾನ ಹರಾಜ್ ಅಂತ ಹೇಳಿಬಿಡುವುದು ಏನೂ ಕಷ್ಟವಲ್ಲ. ಪ್ರಧಾನ ಮಂತ್ರಿಗೆ ಇಷ್ಟು ಕಪ್ಪು ಹಣ ಬರುತ್ತದೆ, ಮುಖ್ಯ ಮಂತ್ರಿಗೆ ಇಷ್ಟು ಬರುತ್ತದೆ ಅಂತ ನಾವೆಲ್ಲರೂ ಆಗೊಮ್ಮೆ ಈಗೊಮ್ಮೆ ಮಾತನಾಡುವುದು ಸಾಮಾನ್ಯ. ಆದರೆ ಅದಕ್ಕೆ ಭವ್ಯ ಭಾರತದ ಮಹಾಜನತೆಯೇ ಅಂದರೆ ನಾವೇ ಕಾರಣ. ಇದೇ ದೇಶದ ನಿಜವಾದ ದುರಂತ. ಮುಖ್ಯ ಮಂತ್ರಿಗಾಗಲಿ, ಪ್ರಧಾನ ಮಂತ್ರಿಗಾಗಲಿ, ಅಥವಾ ಮತ್ತಾವ ರಾಜಕಾರಣಿಗಾಗಲಿ, ಅಧಿಕಾರಿಗಾಗಲಿ ಕಪ್ಪು ಹಣ ಬರುತ್ತದೆ ಎಂದು ನಾವು ಹೇಳಿಕೊಂಡು ತಿರುಗುವುದನ್ನೇ ಒಂದು ಚಟ ಮಾಡಿಕೊಂಡುಬಿಟ್ಟಿದ್ದೇವೆ. ಇನ್ನು ಸಮಾಜದಲ್ಲಿ ಬುದ್ಧಿ ಜೀವಿಗಳು ಎಂದು ಕರೆಸಿಕೊಂಡವರಂತೂ ಇನ್ನೂ ಒಂದೆರಡು ಹೆಜ್ಜೆ ಮುಂದೆ ಹೋಗಿ ‘ರಾಜಕಾರಣಿಗಳು ಸಾಮಾನ್ಯರನ್ನು ಕೊಳ್ಳೆ ಹೊಡೆದು ಹಣ ಮಾಡುತ್ತಿದ್ದಾರೆ‘ ಅಂತೆಲ್ಲಾ ಬಾಯಿ ಬಡಿದುಕೊಳ್ಳುತ್ತಾರೆ. ಆದರೆ ಇದೆಲ್ಲ ನಿಜಾನ ಅಂತ ನೀವು ಈಗಿನ ಕೇಂದ್ರ ಸರಕಾರದ ಮಾನ್ಯ ಗೃಹ ಮಂತ್ರಿಗಳನ್ನೊಮ್ಮೆ ಕೇಳಬೇಕು; ಇದಕ್ಕೆ ಅವರು ‘ಇಲ್ಲಪ್ಪ ನಾವು ಕಪ್ಪು ಹಣ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ನಿಜ, ಆದರೆ ಅದು ನಿಮಗಾಗಿ ಅಂದರೆ ಸಾಮಾನ್ಯ ಮತದಾರನಿಗಾಗಿ, ಬೇಕಾದರೆ ನನ್ನ ಕ್ಶೇತ್ರದಲ್ಲಿ ಕೇಳಿ ನೋಡಿ ವೋಟಿಗಾಗಿ ನಾನು ಎಶ್ಟು ಹಣ ಕೊಟ್ಟಿದ್ದೇನೆ ಅಂತ! ಇದು ನನ್ನೊಬ್ಬನ ಕಥೆ ಅಲ್ಲ, ಎಲ್ಲ ರಾಜಕಾರಣಿಗಳ ಪಾಡು ಇದೇ; ಆದರೆ ನನ್ನ ಸುದ್ದಿ ಮಾತ್ರ ವಿಕಿಲೀಕ್ಸ್ನಲ್ಲಿ ಬಂದಿದೆ ಅಷ್ಟೆ‘ ಅಂತ ತಟ್ಟನೆ ಹೇಲಿಬಿಡಬಹುದು! ಹಾಗೊಮ್ಮೆ ಅವರು ಹೇಳಿಬಿಟ್ಟರೆ? ಏನಿಲ್ಲ, ಆಗ ಬ್ರಷ್ಟಾಚಾರ ಮಾಡಿದ ನಿಜವಾದ ಅಪರಾಧಿಗಳು ನಾವೇ ಅಂದರೆ ಭವ್ಯ ಭಾರತದ ‘ಸತ್‘ (ಸತ್ತ) ಪ್ರಜೆಗಳೇ ಆಗಿಬಿಡುತ್ತೇವೆ! ಹಾಗಾದರೆ ಬ್ರಷ್ಟರನ್ನು ಕಟ್ಟಿಹಾಕುವವರು ಯಾರು? ಗೊತ್ತಿಲ್ಲ; ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು! ಅಂದರೆ? ಏನಿಲ್ಲ, ಪ್ರಭುಗಳೇ ಬ್ರಶ್ಟರು! ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಷ್ಟೆ!

‘ರಾಜಕಾರಣವು ಜನಸೇವೆ ಮಾಡುವ ಒಂದು ದಾರಿ ಎನ್ನುವ ನಂಬಿಕೆ ನಮ್ಮ ಜನರಲ್ಲಿ ಆಳವಾಗಿ ಬೇರೂರಿತ್ತು. ಅದನ್ನು ಸಾಕ್ಶ್ಯೀಕರಿಸಿದ ಅನೇಕ ರಾಜಕಾರಣಿಗಳು ಇದ್ದಾರೆ. ಅವರಲ್ಲಿ ಅತಿ ಮುಖ್ಯವಾದವರು ಲಾಲ್ಬಹದ್ದೂರ್ ಶಾಸ್ತ್ರಿ. ಆದರೆ ಈಗಿನ ರಾಜಕಾರಣಿಗಳೊ ರಾಜಕಾರಣ ದುಡ್ಡು ಮಾಡುವ ಒಂದು ಧಂದೆ ಎಂದುಕೊಂಡಿರುವುದು ಸುಸ್ಫಷ್ಟವಾಗಿದೆ. ಎಲ್ಲರಲ್ಲಿಯೂ ಧನದ್ದಾಹ ಮತ್ತು ಅಧಿಕಾರ ದಾಹಗಳು ತಾಂಡವವಾಡುತ್ತಿವೆ. ಅಧಿಕಾರ ಮತ್ತು ಹಣ ಇದ್ದರೆ ಬೇಕಾದ್ದನ್ನು ಮಾಡಬಹುದು ಎನ್ನುವುದು ಈ ಜನರ ಮನೋಭಾವನೆಯಾದಂತೆ ಕಾಣುತ್ತಿದೆ.‘ ಹೀಗೆಲ್ಲಾ ಮಾತನಾಡುವ ಜನರನ್ನು ನಾವು ನೋಡಿದ್ದೇವೆ, ಆದರೆ ಇದಕ್ಕೆ ಸಾಮಾನ್ಯರೂ ಹೊರತಲ್ಲ. ದುಡ್ಡು ಇಷ್ಟೇ ಸಾಕು ಎಂದು ಅಂದುಕೊಳ್ಳ್ಳುವವರು ಯಾರೂ ಇದ್ದಂತೆ ಕಾಣುತ್ತಿಲ್ಲ. ಇಂತಹ ಸಂದರ್ಬದಲ್ಲಿ ಅಂದರೆ ವೋಟು ಮಾಡುವ ನಾವೇ ಬ್ರಷ್ಟರಾದ ಮೇಲೆ ರಾಜಕಾರಣಿಗಳ ಬಗ್ಗೆ ಮಾತನಾಡುವ ಹಕ್ಕು ನಮಗೆಲ್ಲಿದೆ? ಅವರು ನಮ್ಮ ತೆರಿಗೆ ಹಣದಿಂದ ಕಪ್ಪು ಹಣ ಅಂದರೆ ಅಕ್ರಮ ಹಣ ಮಾಡುತ್ತಾರೆ, ಆದರೆ ಚುನಾವನಾಸಂದರ್ಬದಲ್ಲಿ ಅದನ್ನು ತಿರುಗಿ ಮತ್ತೆ ‘ಸತ್‘ (ಸತ್ತ) ಪ್ರಜೆಗಳಿಗೇ ನೀಡುತ್ತಾರಲ್ಲವೇ? ಈಗ ಯೋಚಿಸಿ ಯಾರು ಬ್ರಶ್ಟರು?

ಹೌದು, ಇದನ್ನೆಲ್ಲ ಯೋಚಿಸಿದರೆ ಅಪರಾಧಿ ಸ್ಥಾನದಲ್ಲಿ ನಾವೆ ಅಂದರೆ ದುಡ್ಡಿನ ಆಸೆಯಿಂದ ಹಾಗು ಜಾತಿಯ ಕಾರಣದಿಂದ ಮತ ನೀಡುವ ಜನಗಳು ನಿಲ್ಲುತ್ತೇವೆ. ನಾವು ಬೇವಿನ ಗಿಡ ನೆಟ್ಟು ಮಾವಿನ ಹಣ್ಣಿನ ಕನಸು ಕಂಡಂತಿದೆ ಈ ಬ್ರಷ್ಟಾಚಾರ ರಹಿತ ರಾಷ್ಟ್ರದ ಕಲ್ಪನೆ ಅಲ್ಲವೇ? ಇಂತಹ ರಾವಣರ ರಾಜ್ಯದಲ್ಲಿ ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಏನಾದರೂ ಈಗ ಇದ್ದಿದ್ದರೆ ಅವರು ಹೃದಯಾಘಾತದಿಂದಲೇ ಸತ್ತುಹೋಗುತ್ತಿದ್ದರೋ ಏನೋ! ಹೌದು ಇದು ನಾವುನೀವೆಲ್ಲ ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾದ ಕಾಲ. ಈಗ ನಾವೆಲ್ಲರೂ ಹಣ ಮತ್ತು ಜಾತಿ ಮತ್ತಿತರ ಯಾವುದೇ ಆಮಿಶಗಳಿಗೆ ಒಳಗಾಗದೇ ಮತದಾನ ಮಾಡಬೇಕು ಮತ್ತು ನಮ್ಮ ದೇಶವನ್ನು ಉಳಿಸಿ ಬೆಳೆಸಬೇಕು ಅಲ್ಲವೇ? ಇದನ್ನು ಓದಿದ ನೀವೆಲ್ಲರೂ ಹಾಗಂತ ಪ್ರತಿಜ್ಞೆ ಮಾಡಿದರೆ ನಾನು ಬರೆದ ಈ ಪುಟ್ಟ ಲೇಖನ ಸಾರ್ತಕವಾದಂತೆ.

In this article I am expressed my opinion on current political situation, and how corruption has become inevitable because of the people. In short the corruption is increasing rapidly amongst politicians because of the people accept money for voting in India. This has become evident after wikileeks' report.

Tuesday, March 15, 2011

ನಾನು ಮತ್ತು ನನ್ನ ಅಂಧತ್ವ.

Dear all here I tried to tell about me and my blindness in my mother tongue kannada. Here I have given an introduction about me, my education, and the factors which influenced my life. I also told about my nature of extra criticism of the things which I don't like.

ನಾನು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅಬಸಿ ಎಂಬ ಹಳ್ಳಿಯೊಂದರ ಮಧ್ಯಮ ವರ್ಗದ ಕುಟುಂಬದವನು. ನಾನು ಹುಟ್ಟಿದ ಮೂರು-ನಾಲ್ಕು ತಿಂಗಳುಗಳ ಕಾಲ ನನ್ನ ಅಂಧತ್ವ ನನ್ನ ತಂದೆ ತಾಯಿಯರಿಗೆ ಗೊತ್ತಾಗಲೇ ಇಲ್ಲ. ಆದರೆ ಸತ್ಯ ಎಷ್ಟು ದಿನ ಹೊರ ಬರದೇ ಹಾಗೆಯೇ ಇರುತ್ತದೆ? ಒಂದು ದಿನ ಯಾವುದೋ ಕಾರಣಕ್ಕೆ ಅನುಮಾನ ಬಂದು ನನ್ನನ್ನು ಕಣ್ಣಿನ ವೈಧ್ಯರ ಬಳಿಗೆ ಕರೆದೊಯ್ದಾಗ ನನಗಿದ್ದ ದೃಷ್ಟಿ ದೋಶದ ಬಗೆಗೆ ಅವರಿಗೆ ತಿಳಿಯಿತು. ಆಗ ಆ ಕಣ್ಣಿನ ವೈಧ್ಯರು ನನ್ನ ದೃಷ್ಟಿ ತೀರಾ ದುರ್ಬಲವಾಗಿದೆ ಎಂದು ಒಂದು ಕನ್ನಡಕ ಕೊಟ್ಟರು. ಆದರೆ ನನಗೆ ತಿಳಿದ ಮಟ್ಟಿಗೆ ಅದು ಉಪಯೋಗವಾಗಲಿಲ್ಲ. ಅಂದರೆ ನನಗೆ ತಿಳಿದಂತೆ ನಾನು ಸ್ವಲ್ಪ ಬೆಳಕನ್ನು ಬಿಟ್ಟರೆ ಇನ್ನೇನನ್ನು ನೋಡಿಲ್ಲ. ಆ ಕಾಲದಲ್ಲಿ ನನ್ನ ಪೋಷಕರಿಗೆ ಅಂಧರಬಗ್ಗೆ ಹಾಗು ಅವರ ಶಿಕ್ಷಣದಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಆ ಸಮಯದಲ್ಲಿ ಅವರು ನನ್ನನ್ನು ಕರೆದುಕೊಂಡು ಅನೇಕ ವೈಧ್ಯರ ಬಳಿ ಅಲೆದಾಡಿದರು. ಅಲೋಪತಿ, ಆಯುರ್‌ವೇದ, ಹೋಮಿಯೋಪತಿ ಹೀಗೆ ಕಂಡ ಕಂಡ ವೈಧ್ಯಕೀಯ ಪದ್ಧತಿಯನ್ನು ನಂಬಿಕೊಂಡು ಆಯಾ ಪದ್ಧತಿಗಳ ವೈಧ್ಯರ ಬಳಿಗೆ ನನ್ನನ್ನು ಕರೆದುಕೊಂಡು ಹೋದರು. ಆದರೆ ದುರದೃಷ್ಟವಶಾತ್ ಯಾವುದೇ ಪ್ರಯೋಜನವಾಗಲಿಲ್ಲ. ಈ ಮಧ್ಯದಲ್ಲಿ ನನಗೆ ಆರು ವರ್ಷ ತುಂಬುವ ಹೊತ್ತಿಗೆ ನಮ್ಮ ಊರಿನ ಬಳಿಯಲ್ಲೇ ಸಿದ್ಧಾಪುರ ಎಂಬಲ್ಲಿ ಅಂಧರಿಗಾಗಿಯೇ ಒಂದು ಶಾಲೆ ಪ್ರಾರಂಭವಾಯಿತು. ಆ ಶಾಲೆಗೆ ನಾನೇ ಮೊದಲ ವಿದ್ಯಾರ್ಥಿ. ಅಲ್ಲಿ ನಾನು ಬ್ರೈಲ್ ಎಂಬ ಅಂಧರಿಗಾಗಿಯೇ ಇರುವ ವಿಶೇಷ ಲಿಪಿಯಲ್ಲಿ ನನ್ನ ಶಿಕ್ಷಣವನ್ನು ಆರಂಭಿಸಿದೆ. ಈ ಹಂತದಲ್ಲಿ ನನಗೆ ನಾನು ಬೇರೆಯವರಿಗಿಂತ ವಿಭಿನ್ನವಾದ ಪದ್ಧತಿಯಲ್ಲಿ ಕಲಿಯುತ್ತಿರುವುದು ಅರಿವಿಗೆ ಬಂತು. ನಾನು ಶಾಲೆಯ ಬಗ್ಗೆ ನನ್ನದೇ ಆದ ಕೆಲವು ಕಲ್ಪನೆಗಳನ್ನು ಹೊಂದಿದ್ದೆ. ಏಕೆಂದರೆ ನಾನು ಸುಮಾರು ನಾಲ್ಕೈದು ವರ್ಷದವನಾಗಿದ್ದಾಗಿನಿಂದಲು ನನ್ನ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕನ ಶಾಲೆಗೆ ಆಗಾಗ ಹೋಗುತ್ತಿದ್ದೆ. ಆದರೆ ಆ ಶಾಲೆಯ ವಾತಾವರ್ಣ ಮತ್ತು ಈ ಶಾಲೆಯ ವಾತಾವರ್ಣಗಳು ಬೇರೆ ಬೇರೆಯಾಗಿದ್ದಿದ್ದು ನನ್ನ ಆ ಪುಟ್ಟ ಮನಸ್ಸಿಗೂ ಅರಿವಿಗೆ ಬಂತು. ಬಹುಶಹ ನಾನು ಈಗಿನಷ್ಟು ದೊಡ್ಡವನಾಗಿದ್ದರೆ ನನ್ನ ಅಪ್ಪನನ್ನು ಕೇಳುತ್ತಿದ್ದೆನೋ ಏನೋ! ಗೊತ್ತಿಲ್ಲ. ಆದರೆ ಅಲ್ಲಿನ ಶಿಕ್ಷಣಕ್ಕೆ ನಾನು ಹೊಂದಿಕೊಂಡು ನಾನೂ ಬ್ರೈಲ್ ಕಲಿಯತೊಡಗಿದೆ. ನನ್ನ ಮನಸ್ಸು ಪ್ರೌಢವಾಗುವ ಹೊತ್ತಿಗಾಗಲೆ ನನಗೆ ಅರಿವಿಲ್ಲದಂತೆ ನನಗೆ ಆತ್ಮವಿಶ್ವಾಸ ಬಂದು ಬಿಟ್ಟಿತ್ತು. ಬಹುಶಹಾ ಇದಕ್ಕೆ ನನ್ನ ಮನೆಯವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರೇ!

ನಾನು ಓದುತ್ತಿದ್ದ ಸಮಯದಲ್ಲಿ ನನಗೆ ಬೇಕಾದ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಲಭ್ಯವಿರಲಿಲ್ಲ. ಆ ಸಮಯದಲ್ಲಿ ನನ್ನ ಅಜ್ಜನಿಂದ ಹಿಡಿದು ನಮ್ಮ ಮನೆಯ ಎಲ್ಲರೂ ನನಗೆ ಓದಿ ಹೇಳಿ ತುಂಬಾ ಸಹಾಯ ಮಾಡಿದರು. ಅವರೆಲ್ಲರ ನೆರವಿನ್ಇಂದ ಮತ್ತು ನನ್ನ ಗುರುಗಳ ಮಾರ್ಗದರ್ಶನದಿಂದ ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಿದ್ಧಾಪುರದಲ್ಲಿ ಮುಗಿಸಿದೆ. ನಂತರ ಮುಂದಿನ ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಮುಗಿಸಿದೆ. ನಾನು ೧೦ನೆ ತರಗತಿ ಮುಗಿಸುವ ಹೊತ್ತಿಗೆ ನನಗೆ ಕಂಪ್ಯೂಟರಿನ ಬಗ್ಗೆ ಮತ್ತು ಅದನ್ನು ಅಂಧರು ಹೇಗೆ ಬಳಸುತ್ತಾರೆಂಬ ಬಗ್ಗೆ ತಿಳಿಯಿತು. ಕಂಪ್ಯೂಟರಿನಲ್ಲೇ ನನ್ನ ಶಿಕ್ಶಣ ಮುಂದುವರಿಸುವುದಾಗಿ ತೀರ್ಮಾನಿಸಿ ಮೈಸೂರಿನ ಜೆ.ಜೆ.ಎಸ್. ಪಾಲಿಟೆಕ್ನಿಕ್ ಫಾರ್ ಫಿಜಿಕಲಿ ಹ್ಯಾಂಡೀಕ್ಯಾಪ್‌ಡ್ ಸೇರಿದೆ. ಅಲ್ಲಿ ನನ್ನ ಕಂಪ್ಯೂಟರ್ ಡಿಪ್ಲೊಮಾವನ್ನು ಪೂರೈಸಿ ಮೆಡಿಕಲ್ ಟ್ರಾನ್ಸ್ಕ್ರಿಪ್ಶನಿಷ್ಟ್‌ಆಗಿ ಸ್ವಲ್ಪ ದಿನ ಕೆಲಸ ಮಾಡಿದೆ. ಈಗ ಅದೆಲ್ಲವನ್ನೂ ಬಿಟ್ಟು ಈಸ್ಪೀಕ್ ಎಂಬ ಟಿ.ಟಿ.ಎಸ್ ತಂತ್ರಾಂಶದಲ್ಲಿ ಕನ್ನಡ ಭಾಷೆಯನ್ನು ಸೇರಿಸುವಲ್ಲಿ ಕೆಲಸ ಮಾಡುತ್ತಿದ್ದೇನೆ.

ನನ್ನ ಪ್ರಾಥಮಿಕ ಶಿಕ್ಶಣದ ಸಮಯದಲ್ಲಿ ನನ್ನ ಮನೆಯಲ್ಲಿ ನನಗೆ ಕೆಲವು ಮಹಾತ್ಮರ ಜೀವನ ಚರಿತ್ರೆಗಳು ಮತ್ತು ರಾಮಾಯಣ, ಮಹಾಭಾರತದಂತಹ ಪುರಾಣಗಳನ್ನೂ ಮತ್ತು ಕೆಲವು ಪತ್ರಿಕೆಗಳಲ್ಲಿ ಬರುವ ಲೇಖನಗಳನ್ನೂ ಓದಿ ಹೇಳುತ್ತಿದ್ದರು. ಅಲ್ಲದೇ ಟೀವೀ ಮತ್ತು ರೇಡಿಯೋಗಳನ್ನು ಕೇಳುತ್ತಿದ್ದೆ. ಇವುಗಳಿಂದಾಗಿ ನನ್ನ ಸಾಮಾನ್ಯ ಜ್ಞಾನ ಮತ್ತು ವೈಚಾರಿಕತೆ ಬೆಳೆಯಿತು. ಈ ಮದ್ಯೆ ನಾನು ಕಂಪ್ಯೂಟರ್ ಕಲಿತೆ. ಇದು ಮಹಾ ಜ್ಞಾನಭಂಡಾರವನ್ನೇ ನನ್ನ ಮುಂದೆ ತೆರೆದಿಟ್ಟಿತು. ಆದರೆ ನಾನು ಕನ್ನಡದಲ್ಲಿರುವ ಪಠ್ಯವನ್ನು ಕಂಪ್ಯೂಟರಿನ ಸಹಾಯದಿಂದ ಓದಲಾಗುತ್ತಿರಲಿಲ್ಲ. ಏಕೆಂದರೆ ನಾನು ಅಂಧನಾಗಿರುವುದರಿಂದ ಕಂಪ್ಯೂಟರಿನ್ಅ ಪರದೆಯ ಮೇಲೆ ಮೂಡುವ ಅಕ್ಶರಗಳನ್ನು ಧ್ವನಿ ರೂಪಕ್ಕೆ ಬದಲಾಯಿಸುವ ವಿಶೇಶ ತಂತ್ರಾಂಶದ ನೆರವು ಬೇಕಾಗುತ್ತದೆ. ಆದರೆ ಈ ವರೆಗೆ ಅಂತಹಾ ತಂತ್ರಾಂಶವು ಇಂಗ್ಲೀಶ್‌ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಅದು ಕನ್ನಡಕ್ಕೂ ಲಭ್ಯವಿದೆ. ಇದನ್ನು ಕನ್ನಡಕ್ಕೆ ತರುವಲ್ಲಿ ನಾನು ಕೆಲಸ ಮಾಡಿದ್ದೇನೆ. ಆ ಬಗ್ಗೆ ಬೇರೆ ಯಾವಾಗಲಾದರೂ ಮಾತನಾಡೋಣ. ಇದರಿಂದಾಗಿ ಸಹಜವಾಗಿಯೇ ನಾನು ಎಲ್ಲವನ್ನು ಪ್ರಶ್ನೆ ಮಾಡತೊಡಗಿದೆ ಮತ್ತು ನನ್ನ ಮನಸ್ಸಿಗೆ ಸರಿ ಎನಿಸದ ವಸ್ತು ಮತ್ತು ವಿಚಾರಗಳನ್ನು ಠೀಕೆ ಮಾಡತೊಡಗಿದೆ. ಅದು ಈಗಲೂ ಹಾಗೆಯೇ ಮುಂದುವರಿದಿದೆ! ಬಹುಶಹಾ ಅಗತ್ಯಕಿಂತ ಸ್ವಲ್ಪ ಜಾಸ್ತಿ ಠೀಕಿಸಿಬಿಟ್ಟೆ ಎಂದೂ ಕೆಲವೊಮ್ಮೆ ನನ್ನ ಮನಸ್ಸಿಗೆ ಅನಿಸಿದ್ದುಂಟು. ಆದರೆ ಆಡಿದ ಮಾತನ್ನು ಹಿಂಪಡೆಯಲು ನಾನೇನು ರಾಜಕಾರಣಿಯೇ?!

ನನಗೆ ನನ್ನ ಶಾಲೆ ಮತ್ತು ಕಾಲೇಜಿನ ಅನುಭವಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ, ಆದರೆ ಇವತ್ತಿಗೆ ಇಷ್ಟು ಸಾಕು. ಇಲ್ಲದ್ದಿದ್ದರೆ ಓದುತ್ತಿರುವ ನಿಮಗೆ ಮಾಹಿತಿಯ ಅಜೀರ್ಣ ಸಮಸ್ಯೆಯಾಗಬಹುದು! ಅಲ್ಲವೇ?

ಇಲ್ಲಿ ಹೇಳಿದ ಈಸ್ಪೀಕ್‌ನ ಬಗ್ಗೆ ಒಂದು ಆರ್ಟಿಕಲ್ ಈ ಬ್ಲಾಗ್‌ನಲ್ಲಿಯೇ ಬರೆದಿದ್ದೇನೆ ದಯವಿಟ್ಟು ಅದನ್ನು ನೋಡಿ.

In this article I focused on my education, but not in depth. I also have given information about Kannada TTS called eSpeak which was developed by mr. Jonathan duddington, A person from UK. He has included more than 70 languages in eSpeak. Kannada is also one amongst them. apart from that around 5-6 Indian languages are also available in that. For more information about eSpeak, please refer to an article regarding using Indian languages with NVDA and eSpeak.

Saturday, March 12, 2011

ಜಪಾನ್ ದುರಂತ

Dear all, In this post I am going to analyse the Japan disaster in my words. The post is in Kannada. Here I have highlighted some similar events which took place around the words some years ago. Also I lit about the helpless of the human beings in such events though we are far more advanced in technology.

ಇತಿಹಾಸವು ಪ್ರಕೃತಿಯ ಅನೇಕ ರುದ್ರನರ್ತನಗಳನ್ನು ಮೂಕಪ್ರೇಕ್ಷಕನಾಗಿ ತನ್ನ ಗರ್ಬದಲ್ಲಿ ಸೇರಿಸಿಕೊಳ್ಳುತ್ತಾ ಬಂದಿದೆ. ಈ ಸಹಸ್ರಮಾನದ ಆದಿಯಲ್ಲಿ ಗುಜರಾತಿನ ಕಚ್ ಮತ್ತು ಬುಜ್‌ಗಳಲ್ಲಾದ ಭೂಕಂಪನ, ೨೦೦೪ ಡಿಸೆಂಬರ್‌ನಲ್ಲಾದ ಭೀಕರ ಸುನಾಮಿ, ಅಮೆರಿಕಾವನ್ನು ಕಂಗೆಡಿಸಿದ ೨೦೦೮ರ ಕತ್ರೀನಾ ಭೀಕರ ಚಂಡಮಾರುತ, ಹೇಟಿ ಎಂಬ ಅಮೆರಿಕಾ ಖಂಡದ ಒಂದು ಪುಟ್ಟ ದ್ವೀಪದಲ್ಲಾದ ಭಾರಿ ಭೂಕಂಪನ, ಇವುಗಳು ಇತ್ತೀಚೆಗೆ ನಡೆದ ಮನು ಕುಲ ಕಂಡ ಭಾರಿ ದುರಂತಗಳು. ಈ ಎಲ್ಲವುಗಳ ನೆನಪು ಮಾಸುವ ಮುನ್ನವೇ ಮತ್ತೊಮ್ಮೆ ಪ್ರಕೃತಿ ತನ್ನ ಅಟ್ಟಹಾಸ ಮೆರೆದಿದೆ. ಈ ಬಾರಿ ಪ್ರಕೃತಿಯ ಅಟ್ಟಹಾಸಕ್ಕೆ ಗುರಿಯಾದುದು ಏಶಿಯಾದ ಒಂದು ಪುಟ್ಟ ರಾಷ್ಟ್ರ ಜಪಾನ್. ಹೌದು ಭೂಕಂಪನ ಮತ್ತು ಸುನಾಮಿಗಳು ತಮ್ಮ ಆಟವನ್ನು ಈ ಬಾರಿ ಜಪಾನೀಯರಿಗೆ ತೋರಿಸಿವೆ. ಆದರೆ ಜಪಾನ್ ಜನತೆಗೆ ಇದೇನು ಹೊಸದಲ್ಲ. ಇದೇ ರೀತಿಯ ಪರಿಸ್ಥಿತಿ ಸುಮಾರು ನೂರು ವರ‍್ಷಗಳ ಹಿಂದೆಯೂ ಅಂದರೆ ಸುಮಾರು ೧೯೨೩ ರ ಹೊತ್ತಿನಲ್ಲಿಯೂ ಬಂದಿತ್ತು. ಆಗ ಸುಮಾರು ೩೦,೦೦೦ ಜನ ಜಲಸಮಾದಿಯಾಗಿದ್ದರು. ಆದರೆ ಈ ಬಾರಿ ಇನ್ನೂ ಹೆಚ್ಚಿನ ಅನಾಹುತವಾದಂತೆ ಕಾಣುತ್ತದೆ.

ಜಪಾನ್ ಒಂದು ಪುಟ್ಟ ದೇಶ. ಈ ದೇಶವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿರುವ ಒಂದು ರಾಷ್ಟ್ರ. ಎರಡನೆ ಮಹಾಯುದ್ಧದಲ್ಲಿ ಅಮೆರಿಕಾದ ಅಣು ಬಾಂಬ್ ಧಾಳಿಗೆ ಗುರಿಯಾಗಿ ಅಪಾರ ನಷ್ಟವನ್ನು ಅನುಭವಿಸಿತು. ಆದರೆ ಅದೆಲ್ಲವನ್ನೂ ಮೀರಿ ಮತ್ತೊಮ್ಮೆ ತಲೆಯೆತ್ತಿ ವಿಷ್ವದ ಬೃಹತ್ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿ ನಿಂತಿತು. ಜಪಾನಿನ ಈ ಕ್ಷಿಪ್ರ ಗತಿಯ ಬೆಳವಣಿಗೆ ಅಮೆರಿಕಾವನ್ನೇ ನಾಚಿಸುವಂಥದ್ದು. ಆದರೆ ಪ್ರಕೃತಿಯ ಮುಂದೆ ಎಲ್ಲರೂ ಕುಬ್ಜರು ಎಂಬುದನ್ನು ಕಾಲ ಮತ್ತೊಮ್ಮೆ ನಿರೂಪಿಸಿದೆ.

ಜಪಾನಿನ ಸುನಾಮಿ ಪೀಡಿತ ಸ್ಥಳಗಳ ದೃಶ್ಯ ಮನ ಕಲಕುವಂಥದ್ದು. ಈ ಸುನಾಮಿಯು ಇಡಿ ಊರಿಗೆ ಊರನ್ನೇ ಕೊಚ್ಚಿಕೊಂಡು ಸಾಗರದ ಒಡಲಿಗೆ ಹಾಕಿದೆ. ಪ್ರಾಣ ಹಾನಿ ಆಸ್ತಿಪಾಸ್ತಿ ಹಾನಿಯನ್ನು ಇನ್ನೂ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಸುಮಾರು ೪೦,೦೦೦,೦ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಗಾಯಗೊಂಡ ಹಾಗು ಬದುಕಿ ಉಳಿದ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಇವರೆಲ್ಲರೂ ತಮ್ಮ ದುರ್ದೈವಕ್ಕೆ ಮರುಗುವಂತಾಗಿದೆ. ನೀವು ವಿಜ್ಞಾನದಲ್ಲಿ ಹಾಗು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದಿದ್ದರೂ ನನ್ನ ಹತ್ತಿರ ನಿಮ್ಮ ಆಟ ಏನು ನಡೆಯುವದಿಲ್ಲ ಎಂದು ಪ್ರಕೃತಿ ಮತ್ತೊಮ್ಮೆ ಮನು ಕುಲಕ್ಕೆ ಸಾರಿ ಹೇಳಿದೆ. ಇಂತಹ ಸಮಯದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರಿಗೆ ಆ ನೋವನ್ನು ಸಹಿಸಿಕೊಳ್ಳುವ ಷಕ್ತಿಯನ್ನು ನೀಡೆಂದು ದೇವರಲ್ಲಿ ಪ್ರಾರ್ಥಿಸುವುದನ್ನು ಬಿಟ್ಟರೆ ನಮಗೆ ಇನ್ನೇನೂ ದಾರಿ ಇಲ್ಲ. ಮುಂದಿನ ದಿನಗಳಲ್ಲಾದರು ಮಾನವನ ಮೇಲೆ ಪ್ರಕೃತಿ ಇಷ್ಟು ಉಘ್ರ ಕೋಪವನ್ನು ತಾಳದಿರಲೆಂದು ಆಶಿಸೋಣ ಅಲ್ಲವೇ? ಅದಕ್ಕೆ ಸರಿಯಾಗಿ ಮಾನವನ ಪ್ರಕೃತಿಯ ಮೇಲಿನ ದೌರ್ಜನ್ಯ ನಿಲ್ಲಬೇಕು ಅಲ್ಲವೇ?

ಈ ಘಟನೆಗಳನ್ನು ನೋಡಿದರೆ ಡಿ.ವಿ.ಜಿ. ಅವರ ಮಂಕು ತಿಮ್ಮನ ಕಗ್ಗವೊಂದು ನೆನಪಾಗುತ್ತದೆ.

---------

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ

NVDA with Kannada and other Indian languages

hi everybody, after a long time I am writing in my blog. For a change this time I am writing in my mother tongue. This article is about a TTS called eSpeak and its use in Kannada and some other Indian languages.

ಎಲ್ಲರಿಗೂ ನನ್ನ ನಮಸ್ಕಾರ. ಬಹಳ ದಿನಗಳ ನಂತರ ನಾನು ಮತ್ತೆ ಬ್ಲಾಗ್‌ನಲ್ಲಿ ಬರೆಯುತ್ತಿದ್ದೇನೆ. ಇದು ನನ್ನ ಮೊದಲ ಕನ್ನಡ ಬರಹ. ಈಗ ನಾನೂ ಕನ್ನಡದಲ್ಲಿ ಬರೆಯಬಲ್ಲೆ. ಇದಕ್ಕೆ ಸಹಾಯ ಮಾಡಿದ್ದು ಈಸ್ಪೀಕ್ ಎಂಬ ಕನ್ನಡ ಟೆಕ್ಸ್ಟ್ ಟು ಸ್ಪೀಚ್ (text to speech) ಅಂದರೆ ಕನ್ನಡದಲ್ಲಿ ಬರೆದ ಅಕ್ಷರಗಳನ್ನು ಧ್ವನಿ ಅಥವ ಮಾತಿನ ರೂಪಕ್ಕೆ ಬದಲಾಯಿಸುವ ಒಂದು ತಂತ್ರಾಂಶ. ಇದರ ಸಹಾಯದಿಂದಾಗಿ ನಾನೂ ಕನ್ನ್ನಡ ಬರೆಯಲು ಸಾಧ್ಯವಾಗಿದೆ. ಕನ್ನಡವಲ್ಲದೇ ಈ ತಂತ್ರಾಂಶದಲ್ಲಿ ಇನ್ನೂ ಅನೇಕ ಭಾಷೆಗಳಿವೆ. ಅವುಗಳಲ್ಲಿ ನಾಲ್ಕೈದು ಭಾರತೀಯ ಭಾಷೆಗಳೂ ಸೇರಿವೆ.

ಇಷ್ಟೆಲ್ಲಾ ಹೇಳಿದ ಮೇಲೆ ಈ ತಂತ್ರಾಂಶದ ಕರ್ತೃವಿನ ಬಗ್ಗೆ ಹೇಳದಿದ್ದರೆ ನನ್ನದು ದೊಡ್ಡ ಅಪಚಾರವೇ ಆಗುತ್ತದೆ. ಈ ತಂತ್ರಾಂಶವನ್ನು ಜೊನಾತನ್ ಡಡ್ಡಿಂಗ್‌ಟನ್ ಎಂಬ ಒಬ್ಬ ಆಂಗ್ಲ ವ್ಯಕ್ತಿ ಅಭಿವೃದ್ಧಿ ಪಡಿಸಿದ್ದಾರೆ. ಇದೊಂದು ಉಚಿತ ಹಾಗು ಓಪನ್‌ಸೋರ್ಸ್ ತಂತ್ರಾಂಶವಾಗಿದೆ. ಇದರ ಕನ್ನಡ ರೂಪವನ್ನು ಸಿದ್ಧಪಡಿಸುವಲ್ಲಿ ನಾನು ನನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿಕೊಳ್ಳಲು ತುಂಬಾ ಖುಶಿಯಾಗುತ್ತಿದೆ. ಡಡ್ಡಿಂಗ್‌‌ಟನ್ ಅವರೇ ಎಲ್ಲಾ ಭಾಷೆಗಳನ್ನೂ ಈಸ್ಪೀಕ್ ತಂತ್ರಾಂಶದಲ್ಲಿ ಸೇರಿಸುತ್ತಾರೆ. ಆದರೆ ಅದಕ್ಕೆ ಆ ಭಾಷೆಯನ್ನು ಮಾತನಾಡುವವರ ನೆರವನ್ನು ಪಡೆದುಕೊಳ್ಳುತ್ತಾರೆ. ಇದುವರೆಗೆ ಈ ತಂತ್ರಾಂಶದಲ್ಲಿ ಸುಮಾರು ೭೪ ಭಾಷೆಗಳಿವೆ. ಇವುಗಳಲ್ಲಿ ಹಲವು ಭಾಷೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಂಧರೇ ಡಡ್ಡಿಂಗ್‌ಟನ್ ಅವರಿಗೆ ನೆರವಾಗಿದ್ದಾರೆ.

ಈಗ ನೀವೇ ಹೇಳಿ, ಶ್ರೀ ಜೊನಾತನ್ ಡಡ್ಡಿಂಗ್‌ಟನ್ ಅವರು ನಿಜವಾದ ಸಮಾಜಸೇವಕರಲ್ಲವೇ? ಇವರು ಪ್ರಪಂಚದಾದ್ಯಂತ ಇರುವ ಬೇರೆ ಬೇರೆ ಭಾಷೆ ಮಾತನಾಡುವ ಅಂಧರಿಗೆ ಅವರವರ ಭಾಷೆಯಲ್ಲಿಯೇ ಜ್ಞಾನಭಂಡಾರವನ್ನು ತೆರೆದಿಡುವ ಧೀಮಂತ ಕೆಲಸವನ್ನು ಮಾಡಿದ್ದಾರೆ.

ಈ ತಂತ್ರಾಂಶವು ಎಲ್ಲಾ ಅಂದರಿಗೂ ಉಚಿತವಾಗಿ ಸಿಗಬೇಕೆಂಬುದೇ ನನ್ನ ಆಶೆಯ. ಆದುದರಿಂದ ನಾನು ಎನ್‌ವೀಡೀಏಎಂಬ ಉಚಿತ ಹಾಗು ಓಪನ್‌ಸೋರ್ಸ್ ಸ್ಕ್ರೀನ್‌ರೀಡರ್ ತಂತ್ರಾಂಶದೊಂದಿಗೆ ನೀಡುತ್ತಿದ್ದೇನೆ. ಇದು ಬರೀ ಅಂಧರಿಗಾಗಿ ಮಾತ್ರವಲ್ಲ. ಕನ್ನಡ ಭಾಷೆಯಲ್ಲಿ ಕಂಪ್ಯೂಟರನ್ನು ಮಾತನಾಡಿಸುವ ಆಶೆ ಹೊಂದಿರುವ ಎಲ್ಲರಿಗಾಗಿ.

ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ನೀವು ನೇರವಾಗಿ ನನ್ನನ್ನೇ ಸಂಪರ್ಕಿಸಬಹುದು.

ನನ್ನ ಈ-ಮೇಲ್ ವಿಳಾಸ: tss.abs@gmail.com
ನನ್ನ ಮೊಬೈಲ್ ಸಂಖ್ಯೆ: ೯೯೮೦೯೮೯೧೭೧.

ಕನ್ನಡ ಮಾತನಾಡಿಸಲು, ನಾನು ಕೊಟ್ಟಿರುವ ಜಿಪ್ ಫೈಲನ್ನು ನಿಮಗ್ಎ ಬೇಕಾದ ಜಾಗದಲ್ಲಿ ಎಕ್ಷ್ಟ್ರಾಕ್ಟ್ ಮಾಡಿಕೊಳ್ಳೀ ಮತ್ತು "NVDA.exe" ಅನ್ನು ರನ್ ಮಾಡಿ. ನಿಮ್ಮ ಕಂಪ್ಯೂಟರ್ ಕನ್ನಡದಲ್ಲಿ ಮಾತನಾಡುತ್ತದೆ!

ಇದರಲ್ಲಿ ಇತರೆ ಕೆಲವು ಭಾರತೀಯ ಭಾಷೆಗಳು ಸೇರಿವೆ. ಉದಾ: ತಮಿಳು, ತೆಲುಗು, ಪಂಜಾಬಿ, ಮಲಯಾಳಂ, ಉರ್ದೂ, ನೇಪಾಳಿ, ಇತರೆ.

ಗಮನಿಸಿ: ಈಸ್ಪೀಕ್ ಯುನಿಕೋಡ್ ಅಕ್ಷರಗಳನ್ನು ಮಾತ್ರ ಓದುತ್ತದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

If you want to use other Indian languages like, Panjabi, Urdu, Telugu, MalayaLam, Hindi, Nepali, Tamil, etc, follow the below given steps:

1. Extract the given file to any location, then run "NVDA.exe" file.
2. Press insert+n and select preferences menu itom in that menu.
3. Select the voice settings press enter or click on that.
4. A dialog box get open, in that a list box is there which lists all the available languages there select the desired language and press enter on that.
5. Again press insert+n and selecct "save configuration" and hit enter on that or click the left mouce button. You are done.

Note: The eSpeak reads the Indian language texts which are written only in Unicode.

Please click here to download.

ತಾಂತ್ರಿಕವಾಗಿ ಹೇಳುವುದಾದರೆ ಈ ತಂತ್ರಾಂಶವು ಫಾರ್‌ಮೆಂಟ್ ಸಿಂತಿಸಿಸ್ ಮೆತೆಡ್ (forment synthesis method) ಅನ್ನು ಬಳಸುತ್ತದೆ. ಇದರಲ್ಲಿ ಧ್ವನಿ ತರಂಗಗಳನ್ನು ಕಂಪ್ಯೂಟರೆ ಉತ್ಪತ್ತಿ ಮಾಡುತ್ತದೆ. ಆದುದರಿಂದ ಇದರ ಧ್ವನಿ ಮನುಷ್ಯರ ಧ್ವನಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಆದರೆ ಅತಿ ಕಡಿಮೆ ಕಂಪ್ಯೂಟರ್ ಮೆಮೋರಿಯನ್ನು ಇದು ಉಪಯೋಗಿಸಿಕೊಳ್ಳುವುದರಿಂದ ಇದನ್ನು ಮೊಬೈಲ್ ಫೋನುಗಳಲ್ಲಿಯೂ ಬಳಸಿಕೊಳ್ಳುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಈಗಾಗಲೆ ಕೆಲಸ ಆರಂಭವಾಗಿದೆ. ಈ ತಂತ್ರಾಂಶವು ಎಸ್.ಎಸ್.ಎಂ.ಎಲ್ [SSML (Speech Synthesis Markup Language)] ಅನ್ನು ಸ್ವಲ್ಪ ಮಟ್ಟಿಗೆ ಬಳಸಿಕೊಂಡಿರುವುದರಿಂದ ಇದರ ಉಚ್ಚಾರಣೆಗಳನ್ನು ಸುಲಭವಾಗಿ ಬದಲಾಯಿಸಬಹುದು. ಈ ತಂತ್ರಾಂಶವನ್ನು ಇತರೆ ಧ್ವನಿ ಜನಕ ತಂತ್ರಾಂಶಗಳಿಗೆ ಫ್ರೆಂಟ್-ಎಂಡ್ (Front-end) ತಂತ್ರಾಂಶವಾಗಿಯೂ ಸಹಾ ಬಳಸಬಹುದಾಗಿದೆ. ಇದು "ವಿಂಡೋಸ್" (Windows) ಮತ್ತು "ಲೈನೆಕ್ಸ್" (Linux) ಕಂಪ್ಯೂಟರ್ ತಂತ್ರಾಂಶಗಳಲ್ಲಿ (opperating systems) ಲಭ್ಯವಿದೆ. ಇದನ್ನು ಯಾವುದೇ ಸ್ಕ್ರೀನ್‌ರೀಡರ್‌ಗಳ ಜೊತೆಗೂ ಉಪಯೋಗಿಸಬಹುದು. ಹೆಚ್ಚಿನ ತಾಂತ್ರಿಕ ಮಾಹಿತಿಗೆ ನನ್ನನ್ನು ಸಂಪರ್ಕಿಸಿ ಅಥವ ಇಲ್ಲಿ ಕ್ಲಿಕ್ಕಿಸಿ.